ಹೊಸನಗರ: ನಗರ ಹೋಬಳಿ ಬೇಳೂರು ಸಮೀಪದ ಹೆಣ್ಣೆಬೈಲಿನ ಶರಾವತಿ ಹಿನ್ನೀರಲ್ಲಿ ಎತ್ತುಗಳ ಮೈತೊಳೆಯುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಓರ್ವ ಮೃತಪಟ್ಟಿದ್ದಾರೆ.
ಸುರೇಶ್ (48) ಮೃತದುರ್ದೈವಿ. ಶುಕ್ರವಾರ ಸಂಜೆ ತನ್ನ ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿದ ಬಳಿಕ ಸುರೇಶ್ ಅವರು ಶರಾವತಿ ಹಿನ್ನೀರಿನಲ್ಲಿ ಎತ್ತಿನ ಮೈತೊಳೆಯುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದ್ದಾರೆ. ಮೃತ ವ್ಯಕ್ತಿಯ ಎಡಗಾಲು ಗ್ಯಾಂಗ್ರೀನ್ಗೆ ಒಳಗಾಗಿದ್ದರಿಂದ ಅದನ್ನು ತುಂಡರಿಸಲಾಗಿತ್ತು. ನೀರಿಗೆ ಬಿದ್ದ ಮೇಲೆ ಮೇಲೆದ್ದು ಬರಲಾಗದೆ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತೆಪ್ಪದ ಸಹಕಾರದಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.