ಜಮ್ಷೆಡ್ಪುರ : ಕರೊನಾ ವೈರಸ್ ರೋಗಿಗಳ ಚಿಕಿತ್ಸೆಗೆಂದು ಒಂದೆಡೆ ಆರೋಗ್ಯ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ತಮ್ಮ ಕುಟುಂಬದಿಂದಲೂ ದೂರವಾಗಿ ಕರ್ತವ್ಯನಿರತರಾಗಿದ್ದರೆ, ಅದೇ ಇನ್ನೊಂದೆಡೆ, ವೈದ್ಯರಿಂದಲೇ ಅಮಾನವೀಯ ವರ್ತನೆಗಳೂ ನಡೆಯುತ್ತಿರುವುದು ವರದಿಯಾಗುತ್ತಿದೆ.
ಅಂಥದ್ದೇ ಒಂದು ಅಮಾನವೀಯ ಘಟನೆ ನಡೆದಿರುವುದು ಜಮ್ಷೆಡ್ಪುರದಲ್ಲಿ. ಗರ್ಭಿಣಿಯೊಬ್ಬರು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದು ಒದ್ದಾಡುತ್ತಿದ್ದರೆ, ಅಲ್ಲಿಯ ವೈದ್ಯಕೀಯ ಸಿಬ್ಬಂದಿ, ಅಲ್ಲಿ ಚೆಲ್ಲಿರುವ ರಕ್ತವನ್ನು ಶುಚಿಗೊಳಿಸುವಂತೆ ಗರ್ಭಿಣಿಗೇ ಹೇಳಿರುವ ಘಟನೆ ಇದು.
ಅದಾಗಲೇ ತೀವ್ರ ರಕ್ತಸ್ರಾವದಿಂದ ಮಗುವನ್ನು ಕಳೆದುಕೊಂಡಿದ್ದರು ಮಹಿಳೆ. ಒಂದೆಡೆ ರಕ್ತಸ್ರಾವದ ನೋವು, ಇನ್ನೊಂದೆಡೆ ಮಗುವನ್ನು ಕಳೆದುಕೊಂಡ ಸಂಕಟ,.. ಈ ನಡುವೆಯೇ ವೈದ್ಯರು ರಕ್ತವನ್ನು ಒರೆಸುವಂತೆ ಹೇಳಿರುವುದು ಮಹಿಳೆಗೆ ತೀವ್ರ ಆಘಾತ ತಂದಿದೆ. ಕರೊನಾ ವೈರಸ್ ಹರಡುವ ಭೀತಿಯಿಂದಾಗಿ ರಕ್ತವನ್ನು ನೀನೇ ಒರೆಸುವಂತೆ ಅಲ್ಲಿಯ ಸಿಬ್ಬಂದಿ ಹೇಳಿರುವುದಾಗಿ ಮಹಿಳೆ ದುಃಖ ತೋಡಿಕೊಂಡಿದ್ದಾರೆ.
ಈ ರೀತಿ ನೋವು ಅನುಭವಿಸಿದ ಮಹಿಳೆಯ ಹೆಸರು ರಿಜ್ವಾನ್ ಖಾತುನ್. ತಾವು ಅನುಭವಿಸಿರುವ ನೋವಿನ ಕುರಿತು ಅವರು, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಪತ್ರ ಬರೆದಿದ್ದಾರೆ. ತಮಗೆ ಗುರುವಾರ ಮಧ್ಯಾಹ್ನ ರಕ್ತಸ್ರಾವ ಆರಂಭವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಸ್ವರೂಪದ ರಕ್ತಸ್ರಾವದಿಂದ ಮಗು ಪ್ರಾಣ ಕಳೆದುಕೊಂಡಿತು. ಈ ನಡುವೆ ವೈದ್ಯರು ಕರೊನಾ ಸೋಂಕಿನ ಕಾರಣ ನೀಡಿ ಅಮಾನವೀಯವಾಗಿ ನಡೆದುಕೊಂಡರು’ ಎಂದು ಪತ್ರದಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.
ಇದೊಂದು ನೋವಿನ ಸಂಗತಿ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)