| ಗುರುಪ್ರಸಾದ್ ತುಂಬಸೋಗೆ ಮೈಸೂರು
ದಂತಚೋರ, ಕಾಡುಗಳ್ಳ ವೀರಪ್ಪನ್ನಿಂದ ಹತರಾದ ‘ಕೀತಿರ್ಚಕ್ರ’ ಐಎಫ್ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಅವರು ಬಳಸುತ್ತಿದ್ದ ಜೀಪ್ ಅನ್ನು ಅರಣ್ಯ ಇಲಾಖೆ ಸಂರಕ್ಷಣೆ ಮಾಡುವ ಮೂಲಕ ಅವರ ನೆನಪನ್ನು ಚಿರಾಯು ಮಾಡಲಾಗಿದ್ದು, ಭಾವನಾತ್ಮಕವಾಗಿ ಅಧಿಕಾರಿಗೆ ಗೌರವ ಸಲ್ಲಿಸಿದೆ.
ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ಬಳಸಲಾಗುತ್ತಿದ್ದ ಜೀಪ್ ಅನ್ನು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದಲ್ಲಿರುವ ಮಲೆಮಹದೇಶ್ವರ ವನ್ಯಜಿವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಸಂರಕ್ಷಿಸಿ ಇಡಲಾಗಿದೆ. ಮಲೆಮಹದೇಶ್ವರ ವನ್ಯಜಿವಿಧಾಮದ ಡಿಸಿಎಫ್ ಏಡುಕೊಂಡಲು ಮತ್ತು ವನ್ಯಜಿವಿ ಮಾರ್ಗದರ್ಶಕ ಜಿ.ಎಸ್. ಸೋಮಶೇಖರ್ ಅವರ ಆಸಕ್ತಿಯೇ ಇದಕ್ಕೆ ಕಾರಣ. ವೀರಪ್ಪನ್ ಉಪಟಳದ ಕಾಲದಲ್ಲಿ (1990-91) ಐಎಫ್ಎಸ್ ಅಧಿಕಾರಿ ಶ್ರೀನಿವಾಸ್ ಡಿಎಫ್ಒ ಆಗಿ ನಿಯೋಜನೆಗೊಂಡರು. ಆಗ ವೀರಪ್ಪನ್ ವಿರುದ್ಧದ ವಿಶೇಷ ಕಾರ್ಯಪಡೆ (ಎಸ್ಟಿಎಫ್)ಗೆ ಸರ್ಕಾರ ಮೂರು ಜೀಪುಗಳನ್ನು (ಕೆ.ಎ.10-ಜಿ 1, ಕೆ.ಎ.10-ಜಿ 2 ಮತ್ತು ಕೆ.ಎ.10- ಜಿ 3) ನೀಡಿತ್ತು. ಈ ಜೀಪ್ಗಳನ್ನು ಶ್ರೀನಿವಾಸ್ ಅವರ ಅವಧಿಯಲ್ಲಿ ಹಲವು ಕಾರ್ಯಾಚರಣೆಗೆ ಬಳಸಿದ್ದರು. ಅಲ್ಲದೆ, ವೀರಪ್ಪನ್ ಹುಟ್ಟೂರು ಗೋಪಿನಾಥಂನಲ್ಲಿ ಆರೋಗ್ಯ ಶಿಬಿರ ಮುಂತಾದ ಚಟುವಟಿಕೆಗಳನ್ನು ಮಾಡುತ್ತಿದ್ದ ಶ್ರೀನಿವಾಸ್ ಅವರು, ಸ್ಥಳೀಯ ಜನರನ್ನು ಆಸ್ಪತ್ರೆಗೆ ಸಾಗಿಸಲು ಈ ಜೀಪುಗಳನ್ನು ಆಂಬುಲೆನ್ಸ್ ಮಾದರಿಯಲ್ಲಿ ಬಳಸುತ್ತಿದ್ದರು.
1991ರ ನವೆಂಬರ್ 10ರಂದು ವೀರಪ್ಪನ್ನಿಂದ ಶ್ರೀನಿವಾಸ್ ಹತರಾದರು. ನಂತರದ ದಿನಗಳಲ್ಲಿ ಈ ಜೀಪುಗಳ ಪೈಕಿ ಒಂದನ್ನು (ಜಿ-1) ಪಾಲಾರ್ ಅರಣ್ಯ ವ್ಯಾಪ್ತಿಯ ಶೆಡ್ನಲ್ಲಿ ನಿಲ್ಲಿಸಲಾಗಿತ್ತು. ಇನ್ನೊಂದನ್ನು (ಜಿ-2) ಹಲವು ವರ್ಷಗಳ ಹಿಂದೆಯೇ ಗುಜರಿಗೆ ಹಾಕಲಾಯಿತು. ಮತ್ತೊಂದು ಜೀಪು (ಜಿ-3) ಮಾಜಿ ಸಚಿವ ಎಚ್.ನಾಗಪ್ಪ ಅವರು ವೀರಪ್ಪನ್ನಿಂದ ಹತ್ಯೇಗಿಡಾದ ಸಂದರ್ಭದಲ್ಲಿ ಜನರ ಕೋಪಕ್ಕೆ ತುತ್ತಾಯಿತು.
ಭಾವನಾತ್ಮಕವಾಗಿ ಗಮನ ಸೆಳೆಯುತ್ತಿದೆ ವಾಹನ: ಪಾಲಾರ್ ಅರಣ್ಯ ವ್ಯಾಪ್ತಿಯ ಶೆಡ್ನಲ್ಲಿ ಅನಾಥವಾಗಿದ್ದ ನಿಂತಿದ್ದ ಜೀಪ್ಗೆ (ಜಿ-1) ಡಿಸಿಎಫ್ ಏಡುಕೊಂಡಲು ಮತ್ತು ವನ್ಯಜಿವಿ ಮಾರ್ಗದರ್ಶಕ ಜಿ.ಎಸ್.ಸೋಮಶೇಖರ್ ಮರುಜೀವ ಕೊಟ್ಟಿದ್ದಾರೆ. ಕೆಲಸಕ್ಕೆ ಬಾರದ ಸರ್ಕಾರಿ ವಾಹನಗಳನ್ನು ಸ್ಕ್ರಾಪ್ (ಗುಜರಿ)ಗೆ ಹಾಕುವುದು ವಾಡಿಕೆ. ಆದರೆ ಶ್ರೀನಿವಾಸ್ ಅವರ ಜೀಪ್ ವಿಷಯದಲ್ಲಿ ಅಧಿಕಾರಿಗಳು ಆ ಕೆಲಸಕ್ಕೆ ಕೈ ಹಾಕದೆ, ಮರುಜೀವ ಕೊಟ್ಟಿದ್ದಾರೆ. ಇದಕ್ಕಾಗಿ ಏಡುಕೊಂಡಲು ಮತ್ತು ಸೋಮಶೇಖರ್ ಸತತ ಶ್ರಮ ವಹಿಸಿದ್ದಾರೆ.
ತಿಂಗಳ ಹಿಂದೆ ಮೈಸೂರಿನಿಂದ ಮೆಕ್ಯಾನಿಕ್ ಕರೆದುಕೊಂಡು ಹೋಗಿ ಪಾಲಾರ್ನಿಂದ ಜೀಪನ್ನು ಟೋ ಮಾಡಿಕೊಂಡು ತರಲಾಗಿದೆ. ನಂತರ ಮೈಸೂರು ವ್ಯಾಪ್ತಿಯ ಗ್ಯಾರೇಜ್ನಲ್ಲಿ ರಿಪೇರಿ ಕೆಲಸ ಪ್ರಾರಂಭಿಸಿ, ಅದರ ಮೇಲು ಹೊದಿಕೆಯಿಂದ ಹಿಡಿದು ತುಕ್ಕು ಹಿಡಿದು ಹಳತಾಗಿದ್ದ ಎಲ್ಲ ಭಾಗಗಳನ್ನು ಬದಲಿಸಲಾಗಿದೆ. ಇಲಾಖೆಯ ಜೀಪ್ ಮಾದರಿಯಲ್ಲೇ ಪೇಂಟಿಂಗ್ ಮಾಡಿಸಿ, ಹೊಸ ಚಕ್ರ ಅಳವಡಿಸಿ ಬಳಕೆಗೆ ಯೋಗ್ಯವಾಗುವಂತೆ ಮಾಡಿದ್ದಾರೆ. ಬಳಿಕ ಕೊಳ್ಳೇಗಾಲಕ್ಕೆ ಚಾಲನೆ ಮಾಡಿಕೊಂಡು ಹೋಗಲಾಗಿದೆ.
ಕೆಟ್ಟು ಮೂಲೆ ಸೇರಿದ್ದ ಜೀಪ್ ಈಗ ಡಿಸಿಎಫ್ ಕಚೇರಿ ಆವರಣದಲ್ಲಿ ಶೋರೂಂನ ವಾಹನದಂತೆ ಕಂಗೊಳಿಸುತ್ತಿದೆ. ಅದನ್ನು ಬಳಸದೆ ಹಾಗೆಯೇ ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಅದಕ್ಕೊಂದು ವಿನೂತನ ಶೈಲಿಯ ಶೆಡ್ ನಿರ್ಮಿಸಿ ಪ್ರದರ್ಶನಕ್ಕೆ ಇಡಲಾಗಿದೆ.
ಐಎಫ್ಎಫ್ ಅಧಿಕಾರಿ ಶ್ರೀನಿವಾಸ್ ಯಾರು?: ಮೂಲತಃ ಆಂಧ್ರಪ್ರದೇಶದವರಾದ ಐಎಫ್ಎಸ್ ಅಧಿಕಾರಿ ಶ್ರೀನಿವಾಸ್ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ನೇಮಕಗೊಂಡಿದ್ದರು. ವೀರಪ್ಪನ್ ಸೆರೆ ಸಲುವಾಗಿ ಆತನ ಹುಟ್ಟೂರು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೋಪಿನಾಥಂನಲ್ಲಿ ಹಲವು ಜನಪರ ಕೆಲಸಗಳನ್ನು ಮಾಡಿದ್ದರು. ಪರಿಣಾಮ, ವೀರಪ್ಪನ್ನ ಹಲವು ಸಹಚರರು ಶರಣಾಗತರಾದರು. ಕೊನೆಗೆ ಒಂದು ದಿನ ವೀರಪ್ಪನ್ ಶರಣಾಗತಿಯ ನಾಟಕವಾಡಿ, ಶ್ರೀನಿವಾಸ್ ಅವರನ್ನು ಕರೆಸಿಕೊಂಡು ಭೀಕರವಾಗಿ ಹತ್ಯೆ ಮಾಡಿದ್ದನು.
ಗೋಪಿನಾಥಂನಲ್ಲಿ ಪಾಳು ಬಿದ್ದಿದ್ದ ಶ್ರೀ ಶಕ್ತಿ ಮಾರಿಯಮ್ಮ ದೇವಾಲಯವನ್ನು ಶ್ರೀನಿವಾಸ್ ಅವರೇ ಕಟ್ಟಿದ್ದ ನೆನಪಿಗಾಗಿ ಸ್ಥಳೀಯರು ಇಂದಿಗೂ ದೇವಿಯ ಫೋಟೋ ಜತೆಗೆ ಅವರ ಫೋಟೋಗೂ ಪೂಜೆ ಸಲ್ಲಿಸುತ್ತಿದ್ದಾರೆ.
ಅರಣ್ಯ ಇಲಾಖೆಗೆ ಸ್ಮರಣೀಯ ಸೇವೆ ಸಲ್ಲಿಸಿ ಹುತಾತ್ಮರಾದ ಶ್ರೀನಿವಾಸ್ ಅವರ ನೆನಪು ಉಳಿಯಲಿ ಎಂಬ ಕಾರಣಕ್ಕೆ ಅವರು ಬಳಸುತ್ತಿದ್ದ ಜೀಪ್ ಅನ್ನು ಕೊಳ್ಳೇಗಾಲದ ಕಚೇರಿ ಆವರಣದಲ್ಲಿ ಸಂರಕ್ಷಿಸಲಾಗಿದೆ.
| ಏಡುಕೊಂಡಲು ಡಿಸಿಎಫ್ ಮಲೆಮಹದೇಶ್ವರ ವನ್ಯಜಿವಿಧಾಮ
ಪತ್ನಿಯ ಕೊಲೆ ಕೇಸ್ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…