ಹೊನ್ನಾಳಿ: ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಇತರರಿಗೆ ಪ್ರೇರಣೆಯಾಗಲಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಶನಿವಾರ ಪಟ್ಟಣದ ಗುರುಭವನದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಪದಗ್ರಹಣ ಪ್ರತಿಜ್ಞಾ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ಸಾಮಾಜಿಕ ಜಾಲತಾಣದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್-19 ಹಾವಳಿ ಹೆಚ್ಚಾದ್ದರಿಂದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಪ್ರತಿಜ್ಞಾ ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರಬಾರದೆಂಬ ಕಾರಣಕ್ಕೆ ಅಯಾ ತಾಲೂಕಿನ 47 ಗ್ರಾಪಂ, ಪಪಂ ವ್ಯಾಪ್ತಿಯಲ್ಲಿ ಆನ್ಲೈನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರೂ ಸಮಾರಂಭ ವೀಕ್ಷಿಸಿ ಪಕ್ಷ ಸಂಘಟನೆಗೆ ಸಹಕರಿಸಬೇಕು ಎಂದು ಕೋರಿದರು.
ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರಿಂದ ಕಾಂಗ್ರೆಸ್ ಪಕ್ಷ ಬಲವರ್ಧನೆಯಾಗಲಿದೆ. ಹಾಲಿ ಶಾಸಕ ರೇಣುಕಾಚಾರ್ಯ ಅವರ ಸಲ್ಲದ ಟೀಕೆಗಳಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು. ಕಾರ್ಯಕರ್ತರು ಲೈವ್ ಕಾರ್ಯಕ್ರಮ ವೀಕ್ಷಿಸಿ ಪಕ್ಷ ಸಂಘಟನೆಗೆ ಸಜ್ಜಾಗಬೇಕು ಎಂದರು.
ಸೋಶಿಯಲ್ ಮಿಡಿಯಾ ಕೋ ಆರ್ಡಿನೇಟರ್ ಸೌಂಗಧಿಕಾ ರಘುನಾಥ್, ಜಿಲ್ಲಾಧ್ಯಕ್ಷ ಗೋವಿಂದ ಹಾಲೇಕಲ್, ಜಿಪಂ ಸದಸ್ಯ ಡಿ.ಜಿ. ವಿಶ್ವನಾಥ್, ಮುಖಂಡರಾದ ಡಾ. ಈಶ್ವರನಾಯ್ಕ ಇತರರಿದ್ದರು.