ಹೊನ್ನಾಳಿ: ಸಾಮಾಜಿಕವಾಗಿ ಮಹಿಳಾ ಸಬಲೀಕರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ಶ್ರಮಿಸುತ್ತಿದೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಜ್ಞಾನ ವಿಕಾಸದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಮಹಿಳೆಯರು ಮತ್ತು ಕುಟುಂಬದ ಏಳಿಗೆಗಾಗಿ ಹತ್ತಾರು ಯೋಜನೆಗಳನ್ನು ತರುತ್ತಿದೆ. ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಸಂಸ್ಥೆಯು ಸರ್ಕಾರಕ್ಕೆ ಪರ್ಯಾಯವಾಗಿ ಕೆಲಸ ಮಾಡುತ್ತದೆ. ಇಡೀ ದೇಶದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಧರ್ಮಸ್ಥಳ ಯೋಜನಾ ಸಂಸ್ಥೆಗೆ ಸಲ್ಲುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ದೀಪಾ ಜಗದೀಶ್ ಮಾತನಾಡಿ, ಸಂಸಾರ ರಥ ಸುಗಮವಾಗಿ ಮುನ್ನಡೆಯಲು ಮಹಿಳೆಯರು ಸಾರಥಿಗಳು. ಕುಟುಂಬದ ಆಗು ಹೋಗುಗಳನ್ನು ಗಮನಿಸಿ ವ್ಯತ್ಯಾಸವಾದರೆ ಅದನ್ನು ಸರಿದಾರಿಗೆ ತರುತ್ತಾರೆ. ಹೆಣ್ಣಿನ ಮೇಲಿನ ಪೂಜ್ಯನೀಯ ಭಾವನೆ ಉಳಿಸಿಕೊಂಡು ಹೋಗಬೇಕಿದೆ. ಸಂಸ್ಥೆಯು ಮಹಿಳೆಯರ ಸಬಲಕ್ಕೆ ಹೆಚ್ಚು ಆದ್ಯತೆ ನೀಡಿದೆ ಎಂದರು.
ವಕೀಲ ಮಲ್ಲಿಕಾರ್ಜುನ್ ಅವರು ಕಾನೂನಿನ ಅರಿವು ಬಗ್ಗೆ ಮಾಹಿತಿ ನೀಡಿದರು. ಬಸವಪಟ್ಟಣ ಯೋಜನಾಧಿಕಾರಿ ನವೀನ್ ಮಾತನಾಡಿದರು. ಕೇಂದ್ರದ ಅಧ್ಯಕ್ಷೆ ಜಯಮ್ಮ, ಜ್ಞಾನ ವಿಕಾಸದ ಸಮನ್ವಯ ಅಧಿಕಾರಿ ನಾಗವೇಣಿ, ಸೇವಾಪ್ರತಿನಿಧಿ ಯಶೋದಾ ಇತರರಿದ್ದರು.