ರಾಯಬಾಗ: ತಾಲೂಕಿನ ಕಂಕಣವಾಡಿ ಪಟ್ಟಣದ ಜನರಿಗೆ ಸರ್ಕಾರಿ ಗಾಯರಾಣ ಜಾಗದ ಹಕ್ಕು ಪತ್ರ ನೀಡಿ, ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟು ಈಗ ಫಲಾನುಭವಿಗಳನ್ನು ಜಾಗ ಖಾಲಿ ಮಾಡಿಸಲು ಸರ್ಕಾರ ಮುಂದಾಗಿದೆ. ಆ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿ ಶನಿವಾರ ರಾಯಬಾಗದಲ್ಲಿ ಪ್ರತಿಭಟನೆ ನಡೆಸಿದ ಫಲಾನುಭವಿಗಳು ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಮೂಲಕ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿದರು.
ಕಂಕಣವಾಡಿ ಪಪಂ ವ್ಯಾಪ್ತಿಯ ಗಾಯರಾಣದಲ್ಲಿ 40 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿದ್ದೇವೆ. ಆಶ್ರಯ ಯೋಜನೆ ಅಡಿ ಮನೆ ನಿರ್ಮಿಸಿಕೊಂಡಿದ್ದು, ಸುಮಾರು 871 ಮನೆಗಳನ್ನು ಗ್ರಾಪಂನಲ್ಲಿ ನೋಂದಣಿ ಕೂಡ ಮಾಡಲಾಗಿದೆ. ಎಲ್ಲ ಸೌಲಭ್ಯ ನೀಡಿ ಈಗ ಜಾಗ ಖಾಲಿ ಮಾಡುವಂತೆ ಆದೇಶ ಮಾಡಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಪ್ರತಿಭಟನಾಕಾರರು ಹೇಳಿದರು. ಸರ್ಕಾರ ನಮ್ಮ ಮನೆಗಳನ್ನು ಸಕ್ರಮಗೊಳಿಸಿ ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಲಕ್ಷ್ಮೀಕಾಂತ ದೇಸಾಯಿ, ಅರ್ಜುನ ನಾಯಿಕವಾಡಿ, ಅಣ್ಣಾಸಾಹೇಬ ದೇಸಾಯಿ, ಬಸು ಪೂಜಾರಿ, ಬಿ.ಎಸ್.ಅರಬಾವಿ, ಲಕ್ಷ್ಮೀಬಾಯಿ ಪಾಟೀಲ, ಚಂದ್ರವ್ವ ಬಳ್ಳಾರಿ, ಮಹಾದೇವಿ ನಿಡೋಣಿ, ಕರೆಪ್ಪ ಮೇತ್ರಿ, ಭೂಪಾಲ ಪೂಜಾರಿ, ಭೀಮಪ್ಪ ನಾಯಿಕವಾಡಿ ಇತರರು ಇದ್ದರು.