ಬೆಂಗಳೂರು: ಇಡೀ ದೇಶವೇ ಕರೊನಾ ಪಿಡುಗಿನ ವಿರುದ್ಧ ಹೋರಾಡುತ್ತಿದ್ದರೆ ತಮಿಳುನಾಡು ಮಾತ್ರ ಕರ್ನಾಟಕದೊಂದಿಗೆ ಗಡಿ ಜಗಳ ತೆಗೆಯಲು ಹುನ್ನಾರ ನಡೆಸಿದೆ. ಅತ್ತಿಬೆಲೆಗೆ ಹೊಂದಿಕೊಂಡಂತಿರುವ ಗಡಿಯಲ್ಲಿ ತಮಿಳುನಾಡು ಪೊಲೀಸರು ಉದ್ದೇಶಪೂರ್ವಕವಾಗಿ ನಾಕಾಬಂದಿ ಏರ್ಪಡಿಸಿ ಲಾಕ್ಡೌನ್ ಹಿನ್ನೆಲೆಯಲ್ಲಿ ವಾಹನಗಳ ಬಳಕೆಯನ್ನು ತಡೆಯಲು ಯತ್ನಿಸುವ ಮೂಲಕ ಗಡಿ ಕ್ಯಾತೆಗೆ ಕಿಚ್ಚುಹೊತ್ತಿಸಿದ್ದರು.
ಗುರುವಾರ ಬೆಳಗ್ಗೆ ಅತ್ತಿಬೆಲೆಗೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗಡಿಭಾಗದಲ್ಲಿ ಲಾಕ್ಡೌನ್ ಅನುಷ್ಠಾನದಲ್ಲಿ ಕರ್ನಾಟಕ ಪೊಲೀಸರು ಕೈಗೊಂಡಿರುವ ಕ್ರಮಗಳ ಪರಿಶೀಲನೆಗೆ ಮುಂದಾಗಿದ್ದರು.
ಈ ಸಂದರ್ಭದಲ್ಲಿ ತಮಿಳುನಾಡು ಪೊಲೀಸರು ರಾಜ್ಯದ ಗಡಿಯೊಳಗೆ ನಾಕಾಬಂದಿ ಏರ್ಪಡಿಸಿರುವುದನ್ನು ಗಮನಿಸಿ, ತಕ್ಷಣವೇ ಅದನ್ನು ತೆರವುಗೊಳಿಸುವಂತೆ ಮಾಡಿದರು.
ಅತ್ತಿಬೆಲೆಗೆ ಭೇಟಿ ನೀಡಿದ್ದ ಗೃಹ ಸಚಿವರನ್ನು ಅಲ್ಲಿದ್ದ ಸಿಬ್ಬಂದಿ ದೇಹದ ತಾಪಮಾನವನ್ನು ಪರಿಶೀಲಿಸಿ, ನಾಕಾಬಂದಿ ಏರ್ಪಡಿಸಿದ್ದ ಪ್ರದೇಶಕ್ಕೆ ಕರೆದೊಯ್ದಿದ್ದು ವಿಶೇಷವಾಗಿತ್ತು.
ಬಳಿಕ ಸ್ವತಃ ಸಚಿವರೇ ಗಡಿಭಾಗದಲ್ಲಿ ವಿನಾಕಾರಣ ಸಂಚರಿಸುತ್ತಿದ್ದ ವಾಹನಗಳ ತಪಾಸಣೆ ನಡೆಸಿದರು. ಅಕ್ರಮ ಪಾಸ್ ಪಡೆದಿರುವವರು ಅಥವಾ ಪಾಸ್ ಪಡೆದು ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಆದ್ಯತೆ ಮೇರೆಗೆ ಪರಿಶೀಲನೆ ನಡೆಸಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸಚಿವರಿಗೆ ಸಹಕರಿಸಿದರು.
ನೀವಿರುವ ಪ್ರದೇಶ ಕಂಪ್ಲೀಟ್ ಸೀಲ್ ಆದರೆ ಹೇಗಿರುತ್ತೆ ಪರಿಸ್ಥಿತಿ ಗೊತ್ತಾ?