ನವದೆಹಲಿ: ಭಾರತ್ ಬಂದ್ ಬೆನ್ನಲ್ಲೇ ಮಂಗಳವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ರೈತ ಮುಖಂಡರ ನಡುವೆ ನಡೆದ ಸಭೆ ವಿಫಲವಾಗಿದೆ.
ಷಾ ಮನವಿ ಹಿನ್ನೆಲೆಯಲ್ಲಿ 13ಕ್ಕೂ ಹೆಚ್ಚು ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರ ಮತ್ತು ರೈತರು ಪಟ್ಟು ಸಡಿಲಿಸದೆ ತಮ್ಮ ನಿಲುವುಗಳಿಗೆ ಭದ್ರವಾಗಿ ಅಂಟಿಕೊಂಡಿರುವುದರಿಂದ ಮಾತುಕತೆ ಫಲಪ್ರದವಾಗಿಲ್ಲ.
ನೂತನ ಕೃಷಿ ಕಾಯ್ದೆಗಳಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಲು ಸರ್ಕಾರ ತಯಾರಿದೆ ಎಂದ ಅಮಿತ್ ಷಾ ಮಾತನ್ನು ನಿರಾಕರಿಸಿದ ರೈತರು ಕಾಯ್ದೆಗಳನ್ನು ಸಂಪೂರ್ಣ ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಇಂದು ಕೇಂದ್ರ ಕೃಷಿ ಸಚಿವ ನರೇಶ್ ಥೋಮರ್ರೊಂದಿಗೆ ನಡೆಯಬೇಕಿದ್ದ ಆರನೇ ಸುತ್ತಿನ ಮಹತ್ವದ ಸಭೆಯು ಕೂಡ ರದ್ದಾಗಿದೆ.
ಇದನ್ನೂ ಓದಿ: ನಿತ್ಯ, ಸತ್ಯವಾದದ್ದನ್ನು ಮರೆತು ಹೊರಟಿದ್ದಾದರೂ ಎಲ್ಲಿಗೆ..?: ಜರೂರ್ ಮಾತು
ನಿನ್ನೆಯಷ್ಟೇ ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ರೈತರ ಮುಂದೆ ಮಂಡಿಸಿದ್ದು, ತಾವು ತಿದ್ದುಪಡಿ ಮಾಡಲಿರುವ ಲಿಖಿತ ರೂಪದ ಅಂಶಗಳನ್ನೊಳಗೊಂಡ ಪ್ರಸ್ತಾವನೆಯನ್ನು ಇಂದು ರೈತರಿಗೆ ಕಳುಹಿಸಿಕೊಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನಾಳೆ ಸರ್ಕಾರ ಮತ್ತು ರೈತರ ನಡುವೆ ಯಾವುದೇ ಸಭೆಗಳು ನಡೆಯುವುದಿಲ್ಲ. ನಾಳೆ ಪ್ರಸ್ತಾವನೆಯನ್ನು ನೀಡುವುದಾಗಿ ಕೃಷಿ ಸಚಿವರು ಹೇಳಿದ್ದಾರೆ. ಪ್ರಸ್ತಾವನೆ ಕುರಿತು ಚರ್ಚಿಸಲು ರೈತರು ಸಭೆ ಸೇರಲಿದ್ದೇವೆ ಎಂದು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನ್ನಾನ್ ಮೊಲ್ಲಾ ಮಂಗಳವಾರ ರಾತ್ರಿ ನಡೆದ ಸಭೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದರು. (ಏಜೆನ್ಸೀಸ್)