ಅಂಕೋಲಾ: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರಮಿಸುವ ಪೊಲೀಸ್ ಇಲಾಖೆಯ ಜತೆಗೆ ಗೃಹರಕ್ಷಕ ದಳದ ಸೇವೆಯೂ ಅಮೂಲ್ಯವಾದುದು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ಜಗದೀಶ ಹೇಳಿದರು.
ಪಟ್ಟಣದ ಪೂರ್ಣ ಪ್ರಜ್ಞಾ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗೃಹರಕ್ಷಕರ ಮೂಲ ವಾರ್ಷಿಕ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಗೃಹರಕ್ಷಕ ದಳ ಪೊಲೀಸ್ ಇಲಾಖೆಯ ಬೆಂಗಾವಲಾಗಿ ಕಾರ್ಯನಿರ್ವಹಿಸುತ್ತದೆ. ಪ್ರಕೃತಿ ವಿಕೋಪಗಳು, ಮಾನವ ನಿರ್ವಿುತ ದುರ್ಘಟನೆಗಳು ಸಂಭವಿಸಿದಾಗ ಗೃಹರಕ್ಷಕ ದಳದವರ ಸೇವೆ ಅಮೂಲ್ಯವಾಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಮಾಧೇಷ್ಟ ಡಾ. ಸಂಜು ನಾಯಕ ಮಾತನಾಡಿ, ಹೊಸದಾಗಿ ಸೇರ್ಪಡೆಯಾದ ಗೃಹರಕ್ಷಕರಿಗೆ 8 ತಿಂಗಳೊಳಗೆ ತರಬೇತಿ ನೀಡಬೇಕಾಗುತ್ತದೆ ಎಂದರು.
ಶಿಬಿರದ ತರಬೇತುದಾರ ಶರದ್ ಇದ್ದರು. ಇದೇ ವೇಳೆ ಎಎಸ್ಪಿ ಎಂ. ಜಗದೀಶ ಅವರನ್ನು ಡಾ. ಸಂಜು ನಾಯಕ ಸನ್ಮಾನಿಸಿ ಗೌರವಿಸಿದರು. ಕ್ಯಾಂಪ್ ಘಟಕಾಧಿಕಾರಿ ಸಿ.ಡಿ. ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರವಾರ ಯುನಿಟ್ ಆಫೀಸರ್ ಎಸ್.ಕೆ. ನಾಯ್ಕ ಪ್ರಾರ್ಥಿಸಿದರು. ಶ್ರೀನಿವಾಸ ನಾಯ್ಕ, ವಿನೋದ ಶಾನಭಾಗ ನಿರ್ವಹಿಸಿದರು. ತಾಲೂಕು ಘಟಕಾಧಿಕಾರಿಗಳು ಇದ್ದರು.