ಬೀರೂರು: ಕಾಫಿ ನಾಡಿನ ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ನಾಲ್ಕು ದಿನಗಳಿಂದ ಸುರಿದ ಮಳೆಗೆ ಕಾಫಿ, ಭತ್ತ, ತರಕಾರಿ ಬೆಳೆಗಳು ನಾಶವಾಗಿವೆ. ಎರಡು ದಿನದಿಂದ ಹೋಬಳಿಯಾದ್ಯಂತ ಸುರಿದ ಮಳೆಯಿಂದಾಗಿ ಟೊಮ್ಯಾಟೊ ಹೊಲದಲ್ಲೇ ಕೊಳೆಯುತ್ತಿದೆ. ಕೊಪ್ಪ ತಾಲೂಕಿನ ಹರಳಾನೆ ಗ್ರಾಮದಲ್ಲಿ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ. ತರೀಕೆರೆ ತಾಲೂಕಿನಲ್ಲಿ ಕೊಟ್ಟಿಗೆ ಕುಸಿದು ಮೇಕೆ ಮರಿ ಸಾವನ್ನಪ್ಪಿದೆ.
ಯರೇಹಳ್ಳಿ, ದೋಗಿಹಳ್ಳಿ, ಇಂಗ್ಲಾರನಹಳ್ಳಿ, ಸೋಮೇನಹಳ್ಳಿ ಗ್ರಾಮದ ಭಾಗದಲ್ಲಿ ಶುಕ್ರವಾರ ತಡ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಜಮೀನುಗಳಲ್ಲಿ ರಾಗಿ, ಕುಂಬಳ ಮತ್ತು ಟೊಮ್ಯಾಟೊ ಬೆಳೆಗಳ ಕೊಯ್ಲಿಗೆ ಅಡ್ಡಿಯಾಗಿದೆ. ಇದರಿಂದ ಬೆಳೆಗಳು ಜಮೀನುಗಳಲ್ಲಿ ಕೊಳೆಯುವಂತಾಗಿದೆ. ಸುತ್ತಮುತ್ತಲಿನ 50 ಎಕರೆಯಲ್ಲಿ ಬೆಳೆದ ಟೊಮ್ಯಾಟೊವನ್ನು ಹೊಲದಿಂದ ಹೊರಗೆ ತರಲು ಸಾಧ್ಯವಾಗದಂತಾಗಿದೆ.
ಅಕಾಲಿಕ ಮಳೆ ತೋಟಗಾರಿಕೆ ಬೆಳೆಗಳಿಗೆ ವರದಾನವೆನಿಸಿದರೂ ತರಕಾರಿ, ಆಹಾರ ಧಾನ್ಯಗಳಿಗೆ ಹಾನಿಯನ್ನೇ ಉಂಟುಮಾಡುತ್ತಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ರೈತರನ್ನು ಅಸಹಾಯಕ ಪರಿಸ್ಥಿತಿಗೆ ದೂಡುತ್ತಿದ್ದು, ಸರ್ಕಾರವೇ ಬೆಳೆ ಹಾನಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಬೇಕು ಎನ್ನುವುದು ರೈತರ ಮಾತು.