ಹೊಳಲ್ಕೆರೆ: ಕುಡಿವ ನೀರು, ಚರಂಡಿ ಸೇರಿ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪಟ್ಟಣ ಪಂಚಾಯಿತಿ ನಿರ್ಲಕ್ಷೃ ವಹಿಸಿದೆ ಎಂದು ಆರೋಪಿಸಿ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಎತ್ತಿನ ಗಾಡಿ ಮೂಲಕ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ರಸ್ತೆಗಳ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಹಲವು ವರ್ಷಗಳಿಂದ ಪಟ್ಟಣಕ್ಕೆ ಸೂಳೆಕೆರೆಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಈಚೆಗೆ 15 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ವಿವಿಧ ವಾರ್ಡ್ಗಳಲ್ಲಿ ಆರಂಭಿಸಿದ್ದ ಶುದ್ಧ ನೀರಿನ ಘಟಕಗಳು ಹದಗೆಟ್ಟಿವೆ. ಜನ ನೀರಿಗಾಗಿ ಅಲೆಯುವುದು ಸಾಮಾನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿನ ಐತಿಹಾಸಿಕ ಹೊಂಡದ ಸುತ್ತ ಕಾಂಪೌಂಡ್ ನಿರ್ಮಿಸಿ ನೀರನ್ನು ಸ್ವಚ್ಛಗೊಳಿಸಿದರೆ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುತ್ತದೆ. ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಸ್ವಚ್ಛತೆ ಮಾಯವಾಗಿದೆ. ಮಳೆ ಬಂದಾಗ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಆದರೆ, ಅಧಿಕಾರಿಗಳು ಮಾತ್ರ ನಿರ್ಲಕ್ಷೃ ವಹಿಸಿದ್ದಾರೆ ಎಂದು ದೂರಿದರು.
ಕೂಡಲೇ ಕುಡಿವ ನೀರು, ವಿದ್ಯುತ್ ದೀಪ, ಸ್ವಚ್ಛತೆ ಸೇರಿ ಪಟ್ಟಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆ ಪಟ್ಟಣ ಘಟಕದ ಅಧ್ಯಕ್ಷ ಲೋಕೇಶ್, ಕಾರ್ಯದರ್ಶಿ ರಾಜಶೇಖರ್ ಕೆ.ಎನ್, ಗೌರವಾಧ್ಯಕ್ಷ ಬಸವನಕೋಟೆ ನಾಗರಾಜ್, ಉಪಾಧ್ಯಕ್ಷ ಮಲ್ಲಪ್ಪ, ಶಿವಮೂರ್ತಿ, ರಂಗಸ್ವಾಮಿ, ಸಿದ್ದರಾಮಪ್ಪ, ಖಜಾಂಚಿ ಶ್ರೀಧರ್ ಕುಮಾರ್ ಸಯ್ಯದ್ ಸನಾವುಲ್ಲಾ, ಶಿವಲಿಂಗಸ್ವಾಮಿ, ಶಿವು ನಾಡಿಗ್ ಇದ್ದರು.