ಹೊಳಲ್ಕೆರೆ: ಶಿಕ್ಷಣದಲ್ಲಿ ವಚನ ಗಾಯನ ಪದ್ಧತಿ ಅಳವಡಿಸುವುದರಿಂದ ಮಕ್ಕಳ ವಿಕಾಸದ ಜತೆಗೆ ಸಂಸ್ಕಾರ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ದುಮ್ಮಿ ಗ್ರಾಮದ ಜ್ಞಾನಜ್ಯೋತಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಶಿಕ್ಷಣ ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಬೇಕು. ಭಾಷೆ, ಸಂಸ್ಕಾರ, ಸಂಸ್ಕೃತಿಗಳಿಗೆ ಪೂರಕವಾಗಿರಬೇಕು. ಶಿಕ್ಷಕರು ಮಕ್ಕಳಿಗೆ ಭಾಷೆ ಶುದ್ಧತೆ ಕುರಿತು ಅರಿವು ಮೂಡಿಸಬೇಕು ಎಂದರು.
ಹಿರಿಯ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಓದಿನಿಂದ ಜ್ಞಾನದ ಸ್ವಾಭಿಮಾನ ಹೆಚ್ಚಾಗಲಿದೆ. ಶಿಕ್ಷಣ ಎನ್ನುವುದು ವ್ಯಕ್ತಿಯಲ್ಲಿ ದೇಶಾಭಿಮಾನ, ಭಾಷಾಭಿಮಾನ ಬೆಳೆಸುವ ಕೆಲಸ ಮಾಡಲಿದೆ ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತಗಂಗಾಧರ್ ಮಾತನಾಡಿ, ಇಂದಿನ ಶಿಕ್ಷಣ ಗೊಂದಲದಲ್ಲಿದೆ. ಕನ್ನಡ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಯಾವುದಾದನ್ನೂ ಸರಿಯಾಗಿ ಕಲಿಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಎಚ್.ಎ.ಹನುಮಲಿ ಷಣ್ಮುಖಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ವಿದ್ಯಾವಂತರಿಗೆ ವಿಶೇಷ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಿಕೊಡುವ ಚಿಂತನೆ ಇದೆ ಎಂದರು.
ಮಾಜಿ ಸಂಸ ಬಿ.ಎನ್.ಚಂದ್ರಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೆಚ್ಚಾಗುತ್ತಿರುವ ಜ್ಯೋತಿಷ್ಯದ ಅಬ್ಬರದ ಪರಿಣಾಮ ಸಮಾಜದಲ್ಲಿ ಮೂಢನಂಬಿಕೆ ಹೆಚ್ಚಾಗುತ್ತದೆ. ಅದರ ಬದಲು ಶರಣರು ಪ್ರತಿಪಾದಿಸಿದ ವಚನ ಮೌಲ್ಯ ಪ್ರಸಾರ ಮಾಡಿದರೆ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದರು.
ಸಂಸ್ಥೆಯ ನಿರ್ದೇಶಕಿ ಎಲ್.ಪುಷ್ಪಾವತಿ, ನಿಕಟಪೂರ್ವ ಅಧ್ಯಕ್ಷ ಇಮ್ರಾನ್, ಆಡಳಿತಾಧಿಕಾರಿ ರವಿಶಂಕರ್, ಜಯರಾಜ್, ಗ್ರಾಪಂ ಅಧ್ಯಕ್ಷ ಬಸವನಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ಫೀರ್ ಮತ್ತಿತರರು ಇದ್ದರು. ಅರ್ಜುನ್ ಇಟಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.