More

    ತಮ್ಮನನ್ನು ಇರಿದು ಕೊಲೆಗೈದ ಆರೋಪಿ ಬಂಧನ

    ಕಾಸರಗೋಡು/ಪುತ್ತೂರು ಗ್ರಾಮಾಂತರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿ ಪೈವಳಿಕೆ ಸನಿಹದ ಕೊಮ್ಮಂಗಳದ ಕಳಾಯಿ ನಿವಾಸಿ ಪ್ರಭಾಕರ ನೋಂಡ(42) ಎಂಬಾತನ ಮೃತದೇಹ ಶನಿವಾರ ನಸುಕಿನ ಜಾವ ಪತ್ತೆಯಾಗಿದೆ. ಪ್ರಕರಣದ ಆರೋಪಿ, ಆತನ ಅಣ್ಣ ಜಯರಾಮ ನೋಂಡನನ್ನು ಪುತ್ತೂರು ನಗರ ಠಾಣೆ ಪೊಲೀಸರು ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಬಂಧಿಸಿ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

    ಪ್ರಭಾಕರ ನೋಂಡ ಪ್ರತಿದಿನ ರಾತ್ರಿ ವೇಳೆ ಮನೆಗೆ ಹೊಂದಿಕೊಂಡಿರುವ ಕೊಟ್ಟಿಗೆಯಲ್ಲಿ ಮಲಗುತ್ತಿದ್ದರು. ಶನಿವಾರ ಬೆಳಗ್ಗೆ ತಾಯಿ ಬೇಬಿ ಪುತ್ರನನ್ನು ಕರೆಯಲು ತೆರಳಿದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ದೇಹದಲ್ಲಿ ಇರಿತದ ಗಾಯ ಕಂಡು ಬಂದಿತ್ತು. ಈ ಬಗ್ಗೆ ತಾಯಿ ದೂರು ನೀಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ, ಡಿವೈಎಸ್‌ಪಿ ಸಿ.ಕೆ ಸುಧಾಕರನ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದರು. ಪ್ರಭಾಕರ ನೋಂಡ ಅವರನ್ನು ಇರಿದು ಕೊಲೆಗೈದಿರುವುದು ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿತ್ತು.

    ಪುತ್ತೂರಿನಲ್ಲಿ ಪತ್ತೆ

    ಈ ಮಧ್ಯೆ ಪ್ರಭಾಕರ ನೋಂಡ ಅಣ್ಣ ಜಯರಾಮ ನೋಂಡ ನಾಪತ್ತೆಯಾಗಿದ್ದು, ಆತನ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಆತ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿರುವ ಕುರಿತು ಕೇರಳ ಪೊಲೀಸರು ನೀಡಿದ ಮಾಹಿತಿಯನ್ನಾಧರಿಸಿ ಪುತ್ತೂರು ನಗರ ಠಾಣೆ ಹೆಡ್‌ಕಾನ್‌ಸ್ಟೆಬಲ್‌ಗಳಾದ ಸ್ಕರಿಯ ಮತ್ತು ಉದಯ ಹಾಗೂ ಕಾನ್‌ಸ್ಟೆಬಲ್ ಕಿರಣ್ ಕಾರ್ಯಾಚರಣೆ ನಡೆಸಿದ್ದಾರೆ. ಆತ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಪತ್ತೆಯಾಗಿದ್ದು, ವಶಕ್ಕೆ ಪಡೆಯಲು ಮುಂದಾದ ವೇಳೆ ಅಲ್ಲಿಂದ ತಪ್ಪಿಸಿಕೊಂಡು ಪಕ್ಕದಲ್ಲಿರುವ ಕೊಳಚೆ ನೀರು ಹರಿಯುತ್ತಿರುವ ತೋಡಿಗೆ ಜಿಗಿದು, ಅಲ್ಲಿಂದ ತೋಡಿನಲ್ಲಿಯೇ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರು ಬೆನ್ನಟ್ಟಿ ಆತನನ್ನು ಹಿಡಿದಿದ್ದಾರೆ.

    ಅಣ್ಣನನ್ನು ಕೊಲೆಗೈದಿದ್ದ!

    ತಮ್ಮ ಪ್ರಭಾಕರ ನೋಂಡ ಅವರನ್ನು ಕೊಲೆ ಮಾಡಿದ ಆರೋಪಿ ಜಯರಾಮ ನೋಂಡ 10 ವರ್ಷದ ಹಿಂದೆ ತನ್ನ ಅಣ್ಣನನ್ನೇ ಕೊಲೆ ಮಾಡಿದ್ದ ಎಂಬ ಮಾಹಿತಿ ಲಭಿಸಿದೆ. ಕೊಲೆಯಾದ ಪ್ರಭಾಕರ ನೋಂಡ ಕನ್ಯಾನ ನಿವಾಸಿ ಹಾಸಿಫ್ ಎಂಬುವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನು. ಅಲ್ಲದೆ ಕಳವು, ಮದ್ಯ ಸಾಗಾಟ ಪ್ರಕರಣದಲ್ಲೂ ಅವನ ಮೇಲೆ ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts