ಹಿರಿಯೂರು: ತಾಲೂಕಿನ ವಿವಿ ಸಾಗರ ಜಲಾಶಯದ ತಡೆಗೋಡೆಗೆ ಪಿಚಿಂಗ್ ನಿರ್ವಿುಸುವಂತೆ ರೈತರು ಒತ್ತಾಯಿಸಿದ್ದಾರೆ.
ಜಲಾಶಯದ ಕೋಡಿ ಬೀಳುವ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿದ ರೈತ ಮುಖಂಡರು ಈ ಬೇಡಿಕೆ ಇಟ್ಟರು.
ಪ್ರಸ್ತುತ ಜಲಾಶಯದ ನೀರಿನ ಮಟ್ಟ 126 ಅಡಿ ತಲುಪಿದ್ದು, 1933 ರ ನಂತರ ಮೊದಲ ಬಾರಿಗೆ ಕೋಡಿ ಬೀಳುವ ಸಾಧ್ಯತೆ ಹೆಚ್ಚಿದೆ. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ನಿರ್ವಿುಸಿರುವ ಜಲಾಶಯಕ್ಕೆ ಶತಮಾನದ ಇತಿಹಾಸವಿದೆ. ಕೋಡಿ ಬಿದ್ದರೆ 4 ಟಿಎಂಸಿ ಅಡಿ ನೀರು ಹರಿದು ಹೋಗಲಿದೆ.
ಕೋಡಿ ಒಳ-ಹೊರ ತಡೆಗೋಡೆ ಪಿಚಿಂಗ್ ಕಲ್ಲುಗಳನ್ನು ಮನೆ, ಹೊಲದಲ್ಲಿ ಬದು ನಿರ್ಮಾಣ ಇತರ ಕಾರ್ಯಕ್ಕೆ ಕಿತ್ತು ಕೊಂಡು ಹೋಗಿದ್ದು, ಕೋಡಿ ನೀರಿನ ರಭಸಕ್ಕೆ ರಸ್ತೆ, ಜಮೀನು, ನದಿ ಪಾತ್ರದ ಗ್ರಾಮದ ಜನ-ಜಾನುವಾರುಗಳಿಗೆ ಹಾನಿಯಾಗಲಿದೆ. ಪಿಚಿಂಗ್ ನಿರ್ವಿುಸುವುದರಿಂದ ನೀರು ವ್ಯರ್ಥವಾಗುವುದನ್ನು ತಪ್ಪಿಸಬಹುದು ಎಂದು ರೈತರು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ರೈತ ಮುಖಂಡರಾದ ಕಸವನಹಳ್ಳಿ ರಮೇಶ್, ದೇವರಾಜ್ ನಾಗಣ್ಣ, ರಾಮಚಂದ್ರ, ಆರ್.ಕೆ.ಗೌಡ, ಕೆ.ಟಿ.ತಿಪ್ಪೇಸ್ವಾಮಿ, ಸಿದ್ದರಾಮಣ್ಣ ಸಣ್ಣ ನೀರಾವರಿ ಇಲಾಖೆ ಎಇಇ ಕೃಷ್ಣಮೂರ್ತಿ, ನಿಜ್ಜೇಗೌಡ, ನವೀನ್ ಇತರರಿದ್ದರು.
ವಿವಿ ಸಾಗರ ಜಲಾಶಯದ 140 ಮೀಟರ್ ಕೋಡಿ ತಡೆ ಗೋಡೆಯ ಒಳ-ಹೊರ ಭಾಗಕ್ಕೆ ತುರ್ತಾಗಿ ಪಿಚಿಂಗ್ ಮಾಡಬೇಕು. ಕೋಡಿ ಬಿದ್ದರೆ 4 ಟಿಎಂಸಿ/45,000 ಕ್ಯುಸೆಕ್ ನೀರು ಹೊರ ಹೋಗುವುದರಿಂದ ರಸ್ತೆ, ಜಮೀನು, ವೇದಾವತಿ ನದಿ ದಡದಲ್ಲಿರುವ ಹಳ್ಳಿಗಳು ಜಲಾವೃತವಾಗುವ ಅಪಾಯವಿದೆ.
– ಕಸವನಹಳ್ಳಿ ರಮೇಶ್, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ