ಹಿರಿಯೂರು: ತಾಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಬಿರುಗಾಳಿ ಸಹಿತ ಮಳೆಗೆ ಬಾಳೆ-ದಾಳಿಂಬೆ ಬೆಳೆಗೆ ಹಾನಿಯಾಗಿದ್ದು, ಮರ-ಗಿಡ, ವಿದ್ಯುತ್ ಕಂಬಗಳು ಧರೆಗುರುಳಿವೆ.
ಗುಡುಗು-ಸಿಡಿಲಿನ ಆರ್ಭಟ, ಭಾರಿ ಗಾಳಿ ಬೀಸಿದ್ದು, ಆಲಿಕಲ್ಲು ಸಹಿತ ಮಳೆ ಸುರಿದಿದೆ.
ಮಳೆಯಿಂದಾಗಿ ತಾಲೂಕಿನ ಯರದಕಟ್ಟೆ, ಬಬ್ಬೂರು, ನಂದಿಹಳ್ಳಿ, ಮೇಟಿಕುರ್ಕೆ, ದೇವರಕೊಟ್ಟ, ಗನ್ನಾಯಕನಹಳ್ಳಿ, ಚಿತ್ರದೇವರಹಟ್ಟಿ ಬಗ್ಗನಡು ಇತರೆಡೆ ಬಾಳೆ ಬೆಳೆಗೆ ಹಾನಿಯಾಗಿದೆ.
ಹಿರಿಯೂರಿನ ಬಿಇಒ ಕಚೇರಿ ಶೀಟ್ ಬಿರುಗಾಳಿಗೆ ಸಂಪೂರ್ಣವಾಗಿ ಕಿತ್ತುಕೊಂಡು ಕೆಳಗೆ ಬಿದ್ದಿದೆ.
ನಗರದ ವಿವಿಧೆಡೆ ಮರ-ಗಿಡಧರೆಗುರುಳಿವೆ, ಕೆಲವೆಡೆ ಶಾಲಾ ಆವರಣದಲ್ಲಿನ ಮರಗಳು ಬೇರು ಸಮೇತ ಬಿದ್ದಿವೆ.
ಮಳೆಯಿಂದಾಗಿ ಬಬ್ಬೂರು, ನಂದಿಹಳ್ಳಿ, ಯರದಕಟ್ಟೆ ಗ್ರಾಮದಲ್ಲಿ 3 ಮನೆಗೆ ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಳೆದ ಒಂದು ವಾರದಿಂದ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ತಾಲೂಕಿನ ಜನರು ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
ಮಳೆ ವಿವರ
ಹಿರಿಯೂರು 22.5, ಬಬ್ಬೂರು 36, ಇಕ್ಕನೂರು 10.2, ಈಶ್ವರಗೆರೆ 23.4, ಸೂಗೂರು 16.4 ಮಿ.ಮೀ ಮಳೆಯಾಗಿದೆ.