ಹಿರಿಯೂರು: ಧರ್ಮಪುರ ಹೋಬಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಶಿಡ್ಲಯ್ಯನಕೋಟೆ ಬ್ಯಾರೇಜ್ನಿಂದ ಬುಡರಕುಂಟೆ, ಹೆಳವರಹಟ್ಟಿ, ಸೂಗೂರುಗಳಿಗೆ ಕುಡಿವ ನೀರು – ಕೃಷಿ ಚಟುವಟಿಕೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ವೇದಾವತಿ ನದಿಪಾತ್ರದ ಹೊಸಹಳ್ಳಿ ಬ್ಯಾರೇಜ್ನಿಂದ ಪೈಪ್ಲೈನ್ ಮೂಲಕ ಧರ್ಮಪುರ ಕೆರೆಗೆ ನೀರು ತುಂಬಿಸಲು ಯೋಜನೆ ರೂಪಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ರೈತರ ಹಿತ ಕಾಯಲು ಬದ್ಧವಾಗಿದ್ದು, ಧರ್ಮಪುರ ಸೇರಿ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲು ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲೂಕಿನಲ್ಲಿ ಲಭ್ಯವಿರುವ ಜಲಸಂಪನ್ಮೂಲ ಬಳಸಿಕೊಂಡು ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂದರು.
ವಿವಿ ಸಾಗರ ಜಲಾಶಯದಿಂದ ಅವೈಜ್ಞಾನಿಕವಾಗಿ ನೀರು ಹರಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ನೀರು ವೇದಾವತಿ ನದಿ ಮೂಲಕ ಹರಿದಿದ್ದು, ಇದೇ ರೀತಿ ನೀರು ಹರಿಸಿದರೆ ವ್ಯರ್ಥವಾಗಿ ಆಂಧ್ರಪ್ರದೇಶ ಸೇರುವ ಸಾಧ್ಯತೆ ಇದೆ.
ಈ ಬಗ್ಗೆ ನೀರಾವರಿ ನಿಗಮದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟರೆ ಕುಡಿವ ನೀರಿಗೆ ಹಾಹಾಕಾರವಾಗಲಿದೆ. ತಕ್ಷಣ ನೀರು ಸ್ಥಗಿತಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಗೊಲ್ಲ ಸಂಘದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷೆ ಲಕ್ಷಿ ್ಮೀದೇವಿ, ನಗರಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ಮುಖಂಡರಾದ ಶ್ರವಣಗೆರೆ ಎಂ.ಶಿವಣ್ಣ, ಗುರುಲಿಂಗಪ್ಪ, ಈರಣ್ಣ, ನಾಗರಾಜ್ರಾವ್, ಮಹೇಶ್ ಪಲ್ಲವ, ಕಬಡ್ಡಿ ಶ್ರೀನಿವಾಸ್, ರಂಗನಾಥ್, ತಿಪ್ಪೇಸ್ವಾಮಿ ಇತರರಿದ್ದರು.
ಧರ್ಮಪುರ ಕೆರೆಗೆ ನೀರು ತುಂಬಿಸಲು ಸರ್ಕಾರದ ಮಟ್ಟದಲ್ಲಿ ಶಕ್ತಿ ಮೀರಿ ಹೋರಾಟ ನಡೆಸಲಾಗುತ್ತಿದ್ದು, ರೈತರ ಶತಮಾನದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ತಾಲೂಕಿನ ರೈತರ ಹಿತ ಕಾಯಲು ಬದ್ಧ.
ಕೆ.ಪೂರ್ಣಿಮಾ ಶ್ರೀನಿವಾಸ್, ಶಾಸಕಿ.