ಕುಂದಗೋಳ: ತಾಲೂಕಿನ ಹಿರೇನರ್ತಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಯಲ್ಲವ್ವ ದ್ಯಾಮಣ್ಣವರ ಹಾಗೂ ಉಪಾಧ್ಯಕ್ಷೆಯಾಗಿ ಸುಶೀಲವ್ವ ತಡಸೂರು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಆಸೀಫ್ ಎಂ. ಘೊಷಿಸಿದರು.
ಹಿರೇನರ್ತಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿ ಯಾರು ನಾಮಪತ್ರ ಸಲ್ಲಿಸದಿರುವುದರಿಂದ ಯಲ್ಲವ್ವ (ಮಹಿಳೆ ಮೀಸಲು) ಮತ್ತು ಸುಶೀಲವ್ವ (ಸಾಮಾನ್ಯ) ಅವರನ್ನು ಕ್ರಮವಾಗಿ ಅಧ್ಯಕ್ಷೆ-ಉಪಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಯಿತು.
ಬಳಿಕ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷೆ ಯಲ್ಲವ್ವ ದ್ಯಾಮಣ್ಣವರ, ಉಪಾಧ್ಯಕ್ಷೆ ಸುಶೀಲವ್ವ ತಡಸೂರು ಮಾತನಾಡಿ, ‘ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಮಧ್ಯವರ್ತಿಗಳನ್ನು ನೆಚ್ಚದೇ ನೇರವಾಗಿ ಕಾರ್ಯಾಲಯಕ್ಕೆ ಆಗಮಿಸಬೇಕು. ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇವೆ. ಪಂಚಾಯಿತಿ ವ್ಯಾಪ್ತಿಯ ಮೂರು ಗ್ರಾಮಗಳಾದ ಬೆನಕನಹಳ್ಳಿ, ಬಸಾಪುರ ಹಾಗೂ ಹಿರೇನರ್ತಿ ಗ್ರಾಮಗಳನ್ನು ಅಭಿವೃದ್ಧಿ ಮಾಡುವ ಮೂಲಕ ಮಾದರಿ ಗ್ರಾಮಗಳನ್ನಾಗಿ ಮಾಡಲಾಗುವುದು. ಅಲ್ಲದೆ, ಶುದ್ಧ ಕುಡಿಯುವ ನೀರು, ರಸ್ತೆ, ಗಟಾರು, ಬಯಲು ಶೌಚಗೃಹ ನಿರ್ವಿುಸಲು ಪ್ರಥಮಾದ್ಯತೆ ನೀಡಲಾಗುವುದು’ ಎಂದರು.
ಅಧ್ಯಕ್ಷೆ- ಉಪಾಧ್ಯಕ್ಷೆಯನ್ನು ಸನ್ಮಾನಿಸಿ ಮಾತನಾಡಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಬಿ. ಬೆಂಡಿಗೇರಿ, ‘ಅಭಿವೃದ್ಧಿ ಕಾರ್ಯಗಳಿಗೆ ಎಲ್ಲ ಸದಸ್ಯರ ಸಹಾಯ-ಸಹಕಾರ ಅತ್ಯವಶ್ಯಕ. ಗ್ರಾಪಂ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ’ ಎಂದು ಹೇಳಿದರು.