ಹುಬ್ಬಳ್ಳಿ: ಹಾವೇರಿ ಜಿಲ್ಲೆ ರಟ್ಟಿಹಳ್ಳಿಯಲ್ಲಿ 14 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿ ಅಸ್ವಸ್ಥಗೊಂಡಿರುವ ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಬಿ.ಡಿ. ಹಿರೇಮಠ ಅವರು ಚಿಕಿತ್ಸೆಗಾಗಿ ನಗರದ ಕಿಮ್ಸ್ಗೆ ದಾಖಲಾಗಿದ್ದಾರೆ.
ರಟ್ಟಿಹಳ್ಳಿಯಲ್ಲಿ ವೈದ್ಯರ ಸಲಹೆ ಮೇರೆಗೆ ಬುಧವಾರ ತಡರಾತ್ರಿ 1.30ಕ್ಕೆ ಕಿಮ್ಸ್ಗೆ ಆಗಮಿಸಿದ ಅವರಿಗೆ ಕ್ಯಾತ್ಲ್ಯಾಬ್ನ ವಿಐಪಿ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿಕಾರಿಪುರ ತಾಲೂಕಿನ ಉಡಗಣಿ, ತಾಳಗುಂದ ಕೆರೆ ತುಂಬಿಸುವ ನೀರಾವರಿ ಯೋಜನೆಗೆ ಪೈಪ್ ಅಳವಡಿಸಲು ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳುವುದನ್ನು ಕೈಬಿಡುವಂತೆ ಒತ್ತಾಯಿಸಿ ಬಿ.ಡಿ. ಹಿರೇಮಠ ಹೋರಾಟ ಮಾಡುತ್ತಿದ್ದಾರೆ.
ಸಚಿವರಾದ ಬಿ.ಸಿ. ಪಾಟೀಲ, ಬಸವರಾಜ ಬೊಮ್ಮಾಯಿ ಅವರು ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ, ವಿವಾದ ಇತ್ಯರ್ಥಗೊಳ್ಳುವವರೆಗೆ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದರು.
ಕಿಮ್ಸ್ನಲ್ಲಿ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಬಿ.ಡಿ. ಹಿರೇಮಠ, ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೂರವಾಣಿ ಮೂಲಕ ಬುಧವಾರ ಮಾತನಾಡಿದ್ದಾರೆ. ಶೀಘ್ರ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ ಎಂದರು.
ಡಿ. 21ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು ನನ್ನನ್ನೂ ಆಹ್ವಾನಿಸಿದ್ದಾರೆ. ಡಿ. 31ರೊಳಗೆ ವಿವಾದ ಇತ್ಯರ್ಥಪಡಿಸದಿದ್ದರೆ ವಿಧಾನಸೌಧದ ಎದುರು ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಎಚ್ಚರಿಸಿದರು.