ಎನ್.ಆರ್.ಪುರ: ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಹಿಂದು ಪರಿಷತ್, ಬಜರಂಗದಳ, ಎನ್.ಆರ್.ಪುರ ಪ್ರಖಂಡಯಿಂದ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿಯನ್ನು ಶನಿವಾರ ಅದ್ದೂರಿ ಶೋಭಾ ಯಾತ್ರೆಯೊಂದಿಗೆ ವಿಸರ್ಜಿಸಲಾಯಿತು.
ಅಂಬೇಡ್ಕರ್ ವೃತ್ತದಿಂದ ಬಸ್ತಿಮಠ, ಟಿ.ಬಿ.ವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಎಲ್ಲೆಲ್ಲೂ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಮಂಗಳೂರಿನ ಡಿಜೆ, ಕೇರಳದ ಚಂಡೆ ವಾದ್ಯ, ನಾಸಿಕ ಡೋಲ್ ಮುಂತಾದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಿಜೆ ಹಾಡಿಗೆ ಮಹಿಳಾ ಕಾರ್ಯಕರ್ತೆಯರು, ಹೆಣ್ಣು ಮಕ್ಕಳೂ ಕುಣಿದು ಸಂಭ್ರಮಿಸಿದರು. ಹಿಳುವಳ್ಳಿ ಭದ್ರಾ ಹಿನ್ನೀರಿನಲ್ಲಿ ಗಣಪತಿ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಯಿತು. ಸಾವಿರಾರು ಕಾರ್ಯಕರ್ತರು ಹಿಂದು ಮಹಾಗಣಪತಿ ವಿಸರ್ಜನೆಗೆ ಸಾಕ್ಷಿಯಾದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಮಾಜಿ ಸಚಿವ ಡಿ.ಎನ್.ಜೀವರಾಜ್, ಹಿಂದು ಮಹಾಗಣಪತಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್, ಗೌರವಾಧ್ಯಕ್ಷ ಕೆ.ಪಿ.ಸುರೇಶ್ಕುಮಾರ್, ಕಾರ್ಯದರ್ಶಿ ಕೂಸ್ಗಲ್ ಪುರುಷೋತ್ತಮ್, ಖಜಾಂಚಿ ಮಾಂತೇಜ್, ಎನ್.ಡಿ.ಪ್ರಸಾದ್, ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್, ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ್, ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಎಚ್.ಎಸ್.ಕೃಷ್ಣಮೂರ್ತಿ ಸೇರಿದಂತೆ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.