More

    ಧನ್ವಂತರಿ: ಅದ್ಭುತ ಔಷಧೀಯ ಗುಣಗಳ ಅಮೃತಬಳ್ಳಿ

    ಧನ್ವಂತರಿ: ಅದ್ಭುತ ಔಷಧೀಯ ಗುಣಗಳ ಅಮೃತಬಳ್ಳಿ

    ರಾಮ-ರಾವಣರ ಯುದ್ಧ ಮುಗಿದ ನಂತರ ಸತ್ತ ವಾನರರನ್ನು ಬದುಕಿಸಲು ದೇವೇಂದ್ರ ಅಮೃತಸಿಂಚನವನ್ನು ಮಾಡಿದನಂತೆ. ಹಾಗೆ ಭೂಮಿಯ ಮೇಲೆ ಬಿದ್ದ ಕೆಲವು ಅಮೃತದ ಹನಿಗಳಿಂದ ಅಮೃತಬಳ್ಳಿ ಹುಟ್ಟಿತಂತೆ. ಈ ಕಥೆ ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಅದರ ಗುಣಗಳನ್ನು ನೋಡಿದರೆ ಇದು ದೇವರ ವರ ಎನಿಸುತ್ತದೆ. ಅದರ ಔಷಧೀಯ ಗುಣಗಳು ಅಷ್ಟು ಅದ್ಭುತವಾದವು.

    ಮಧುಮೇಹ, ದಮ್ಮು, ಕೆಮ್ಮು, ಮೂತ್ರರೋಗಗಳು, ಹೃದ್ರೋಗ, ವಾತರೋಗಗಳು, ಜ್ವರ, ಕ್ರಿಮಿ, ಕಾಮಾಲೆ, ರಕ್ತಹೀನತೆ, ಚರ್ಮದ ಸಮಸ್ಯೆಗಳು, ಆಮವಾತ, ಅಸಿಡಿಟಿ, ಆಮಶಂಕೆ, ಅಗ್ನಿಮಾಂದ್ಯ, ಮೂಲವ್ಯಾಧಿ, ತಾಯಿಹಾಲು ಕೆಟ್ಟು ಮಗುವಿನಲ್ಲಿ ಸಮಸ್ಯೆಯಾಗುತ್ತಿದ್ದರೆ, ಗುಣವಾಗದ ಗಾಯವಿದ್ದರೆ – ಹೀಗೆ ಹಲವಾರು ರೋಗಗಳನ್ನು ತಡೆಯುವುದು ಮತ್ತು ಗುಣಪಡಿಸುವ ಶಕ್ತಿ ಅಮೃತಬಳ್ಳಿಗಿದೆ. ಬಹುತೇಕ ಎಲ್ಲ ರೀತಿಯ ಜ್ವರಗಳಿಗೆ ಅಮೃತ ಬಳ್ಳಿ ರಾಮಬಾಣ. ಅದಕ್ಕೆ ಕಾರಣವಿದೆ. ಅದು ದೇಹದ ವಿಷವನ್ನು ಹೊರಹಾಕುತ್ತದೆ; ಕೆಟ್ಟ ಬ್ಯಾಕ್ಟೀರಿಯಾ, ವೈರಸ್​ಗಳನ್ನು ಕೊಲ್ಲುತ್ತದೆ. ವೈರಸ್ ನಿರೋಧಕ ಗುಣವಂತೂ ಅತ್ಯಂತ ಪ್ರಬಲವಾಗಿದೆ. ಏಡ್ಸ್ ವೈರಸ್​ನಿಂದ ಹಿಡಿದು ಡೆಂಘ ವೈರಸ್​ವರೆಗೆ ಇದು ಬಹುತೇಕ ಎಲ್ಲ ವೈರಸ್​ಗಳನ್ನೂ ಎದುರಿಸುತ್ತದೆ ಎಂಬುದು ಇತ್ತೀಚಿನ ಸಾವಿರಾರು ಸಂಶೋಧನೆಗಳಲ್ಲಿ ಕೂಡ ಸಾಬೀತಾಗಿದೆ.

    ಇದನ್ನೂ ಓದಿ: ಗಂಡ ಹೆಂಡತಿಯಾಗಲು ಅಡ್ಡಿಯಾದ ಕರ್ನಾಟಕ-ಕೇರಳ ಬಾರ್ಡರ್!

    ಇದರ ವಿಶೇಷತೆಯೆಂದರೆ ವೈರಸ್ ನಮ್ಮ ದೇಹ ಪ್ರವೇಶಿಸಿದ ನಂತರ ಅದನ್ನು ಕೊಲ್ಲುವುದೊಂದೇ ಅಲ್ಲ; ನಮ್ಮ ದೇಹದ ಮೇಲೆ ವೈರಸ್​ನ ದಾಳಿಯಾಗುವ ಮೊದಲೇ ಸೇವಿಸಿದರೆ ಬಹುತೇಕ ಎಲ್ಲ ವೈರಾಣುಗಳ ವಿರುದ್ಧ ಹೋರಾಡುವ ಶಕ್ತಿಯನ್ನೂ ದೇಹಕ್ಕೆ ಕೊಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವಿರುವುದರಿಂದಲೇ ಇದಕ್ಕೆ ಆಯುರ್ವೆದದಲ್ಲಿ ‘ರಸಾಯನೀ’ ಎಂದು ಕರೆದಿದ್ದಾರೆ. ಇದನ್ನು ಸೇವಿಸುವಾಗ ಎರಡು ಸಂಗತಿಗಳನ್ನು ನೆನಪಿಟ್ಟುಕೊಳ್ಳಬೇಕು. ಅಮೃತಬಳ್ಳಿಯ ಅತಿಸೇವನೆೆಯೂ ತೊಂದರೆ ಉಂಟುಮಾಡಬಲ್ಲುದು. ಉಷ್ಣಗುಣವನ್ನು ಹೊಂದಿರುವ ಕಾರಣ ಅತಿ ಸೇವನೆಯಿಂದ ಬಾಯಿಹುಣ್ಣು, ಸುಸ್ತು, ಮಲಬದ್ಧತೆಯಂತಹ ಸಮಸ್ಯೆಗಳಾಗಬಹುದು.

    ಇನ್ನೊಂದು ಏನೆಂದರೆ ನಾವು ಸೇವಿಸುತ್ತಿರುವುದು ನಿಜವಾಗಿಯೂ ಅಮೃತಬಳ್ಳಿಯೇ ಎಂದು ಖಾತರಿಪಡಿಸಿಕೊಳ್ಳಬೇಕು. ಏಕೆಂದರೆ ಚಿಕೂನ್​ಗುನ್ಯಾ ತೀವ್ರವಾಗಿದ್ದ ಸಂದರ್ಭದಲ್ಲಿ ತೊಂಡೆಕಾಯಿಯ ಬಳ್ಳಿಯನ್ನೂ ಅಮೃತಬಳ್ಳಿಯೆಂದು ಮಾರಲಾಗಿತ್ತು. ಅಮೃತಬಳ್ಳಿಯ ಮುಖ್ಯ ಲಕ್ಷಣವೆಂದರೆ ಅದನ್ನು ಕತ್ತರಿಸಿದಾಗ ಚಕ್ರದಂತೆ ಕಾಣುತ್ತದೆ. ಹಾಗೆ ಇಲ್ಲದೆ ಹೋದರೆ ಅದು ಅಮೃತಬಳ್ಳಿಯಲ್ಲ. ಎಲ್ಲರೂ ಪ್ರತಿನಿತ್ಯ ಸ್ವಲ್ಪ ಪ್ರಮಾಣದಲ್ಲಿ ಸೇವಿಸಬಹುದು. ವಿಶೇಷವಾಗಿ ಮೇಲೆ ಹೇಳಿದ ಸಮಸ್ಯೆಗಳಿರುವವರು, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎನ್ನುವವರು ಇದನ್ನು ಹೆಚ್ಚಾಗಿ ಸೇವಿಸಬೇಕು. ಇಲ್ಲವಾದರೆ ವಾರಕ್ಕೊಮ್ಮೆ ಬಳಸಿದರೂ ಆದೀತು. ಹಾಗೆ ಬಳಸುತ್ತಿದ್ದರೆ ನಮ್ಮ ದೇಹದಲ್ಲಿನ ವಿಷದ ಪ್ರಮಾಣ ಕಡಿಮೆಯಾಗಿ ದೇಹಶುದ್ಧಿಯಾಗುತ್ತದೆ.

    ಕಿರುಬೆರಳಿನ ಅರ್ಧ ಉದ್ದದ (ಸುಮಾರು 3-4 ಗ್ರಾಂ) ಅಮೃತಬಳ್ಳಿಯ ತುಂಡನ್ನು ತೆಗೆದುಕೊಂಡು, ಸ್ವಲ್ಪ ಶುಂಠಿ, ಕೊತ್ತಂಬರಿ ಮತ್ತು ಜೀರಿಗೆ ಹಾಕಿ ನಾಲ್ಕು ಲೋಟ ನೀರು ಹಾಕಿ ಸಣ್ಣ ಬೆಂಕಿಯಲ್ಲಿ ಒಂದು ಲೋಟಕ್ಕೆ ಬರುವಂತೆ ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಉಷ್ಣವಾಗುತ್ತಿದೆ ಎನಿಸಿದರೆ ಒಂದರಿಂದ ಎರಡು ಗ್ರಾಂ ಮಾತ್ರ ಅಮೃತಬಳ್ಳಿ ಬಳಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts