ಬೆಂಗಳೂರು: ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತಿಂಗಳು ಕಳೆದರೂ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದೋಷಾರೋಪಣೆ ಪಟ್ಟಿ ಸಲ್ಲಿಸಿಲ್ಲ. ಈ ಕುರಿತು ಇಂದು ಎಸಿಬಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ತಹಸೀಲ್ದಾರ್ ಪಿ.ಎಸ್. ಮಹೇಶ್ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ, 60 ದಿನಗಳಾದರೂ ದೋಷಾರೋಪ ಪಟ್ಟಿ ಸಲ್ಲಿಸದಿರುವುದು ಗಮನಕ್ಕೆ ಬಂದಿದೆ.
ಎಫ್ಎಸ್ಎಲ್ ವರದಿಗೆ ಕಾಯುತ್ತಿರುವುದಾಗಿ ಎಸಿಬಿ ವಕೀಲರ ಸಮಜಾಯಿಷಿ ನೀಡಿದ್ದನ್ನು ಒಪ್ಪದ ನ್ಯಾ. ಎಚ್.ಪಿ. ಸಂದೇಶ್, 60 ದಿನಗಳ ಒಳಗೆ ಚಾರ್ಜ್ಶೀಟ್ ಸಲ್ಲಿಸಬೇಕು. ಆ ಬಳಿಕ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದೆ. ನಮ್ಮದು ಸಮಗ್ರತೆಯುಳ್ಳ ಸಂಸ್ಥೆ ಎಂದು ಹೇಳಿಕೊಳ್ಳುತ್ತೀರಿ. 60 ದಿನಗಳೊಳಗೆ ಚಾರ್ಜ್ಶೀಟ್ ಸಲ್ಲಿಸಬೇಕೆಂದು ತಿಳಿದಿಲ್ಲವೇ? ಎಂದು ಎಸಿಬಿ ವಕೀಲರನ್ನು ಪ್ರಶ್ನಿಸಿದ್ದಾರೆ.
ಆರೋಪಿಗಳಿಗೆ ನೀವೇ ಪರೋಕ್ಷ ರಕ್ಷಣೆ ನೀಡುತ್ತಿರುವಂತಿದೆ. ಎಸಿಬಿಯನ್ನು ಭ್ರಷ್ಟಾಚಾರ ತಡೆಯಲು ಸ್ಥಾಪಿಸಲಾಗಿದೆಯೇ ಭ್ರಷ್ಟಾಚಾರಿಗಳ ರಕ್ಷಣೆಗಾಗಿ ಸ್ಥಾಪಿಸಲಾಗಿದೆಯೇ? ತನಿಖಾಧಿಕಾರಿ ಈವರೆಗೂ ಏಕೆ ಆರೋಪ ಪಟ್ಟಿ ಸಲ್ಲಿಸಿಲ್ಲ? ಇದು ನಾಚಿಕೆಗೇಡಿನ ಸಂಗತಿ. ಈ ಬಗ್ಗೆ ವಿಚಾರಣೆ ನಡೆಸಿ, ವರದಿ ನೀಡುವಂತೆ ಆದೇಶಿಸುತ್ತೇನೆ ಎಂದು ನ್ಯಾ. ಸಂದೇಶ್ ಎಸಿಬಿ ಪರ ವಕೀಲರಿಗೆ ಎಚ್ಚರಿಕೆ ನೀಡಿದ್ದಾರೆ.
ಆ್ಯಂಬುಲೆನ್ಸ್ ಅಪಘಾತ ಪ್ರಕರಣ; ಗ್ರಾಮಸ್ಥರಿಂದ ಸಾಮೂಹಿಕವಾಗಿ ನಾಲ್ವರ ಅಂತಿಮಸಂಸ್ಕಾರ