ಲಿಂಗಸುಗೂರು: ಭಾರತೀಯ ಧರ್ಮ, ಪರಂಪರೆ, ಸಂಸ್ಕೃತಿಗಳ ಆಚರಣೆಗಳ ಪೈಕಿ ವೃತ ಆಚರಣೆ ಶ್ರೇಷ್ಠವಾಗಿದ್ದು, ಮಾಲಾಧಾರಿಗಳು ದಶ ಧರ್ಮ ಸೂತ್ರಗಳನ್ನು ಶ್ರದ್ಧಾ ಭಕ್ತಿಯಿಂದ ಪಾಲನೆ ಮಾಡಿದರೆ ವೃತಾಚರಣೆಗೆ ಅರ್ಥ ಬರಲಿದೆ ಎಂದು ಯರಡೋಣಾ ಕ್ರಾಸ್ನ ಸಿದ್ಧರಾಮೇಶ್ವರ ಗುರುಮಠದ ಮುರುಘೇಂದ್ರ ಶಿವಯೋಗಿಗಳು ಹೇಳಿದರು.
ಕಲಬುರಗಿಯಿಂದ ಅಂಜನಾದ್ರಿ ಪರ್ವತಕ್ಕೆ ಕ್ರೆಡಲ್ ಮಾಜಿ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ತೆರಳುತ್ತಿದ್ದ ನೂರಾರು ಮಾಲಾಧಾರಿಗಳನ್ನು ಮಠದಲ್ಲಿ ಆಶೀರ್ವದಿಸಿ ಮಾತನಾಡಿದರು. ಹನುಮ ಮಾಲಾಧಾರಿಗಳು ಶ್ರದ್ಧೆ-ಭಕ್ತಿಯಿಂದ ವೃತ ಆಚರಿಸಬೇಕು. ಮಾಲಾಧಾರಿಗಳು ಅಹಿಂಸಾ ಸತ್ಯ ಮಸ್ತ್ವೇಯಂ ಬ್ರಹ್ಮಚರ್ಯಾ ದಯಾ ಕ್ಷಮಾ, ದಾನಂ ಪೂಜಾ ಜಪೋ ಧ್ಯಾನಮಿತಿ ಧರ್ಮಸ್ಯ ಸಂಗ್ರಹ ಎಂಬ ದಶ ಧರ್ಮ ಸೂತ್ರಗಳನ್ನು ಪಾಲಿಸಬೇಕು ಎಂದರು.
ಧರ್ಮವನ್ನು ನಾವು ಕಾಪಾಡಿದರೆ, ಧರ್ಮ ನಮ್ಮನ್ನು ಕಾಪಾಡುತ್ತದೆ. ಶ್ರೀ ರಾಮ ಎಂಬ ಗುರುವಿನ ಅನುಗ್ರಹವಿದ್ದ ಶಿಷ್ಯ ಏನೆಲ್ಲ ಸಾಧಿಸಿದ ಎಂಬುದಕ್ಕೆ ಆಂಜನೇಯ ಸಾಕ್ಷಿಯಾಗಿದ್ದಾನೆ. ಭಾ ಎಂದರೆ ಜ್ಞಾನ, ರತ ಎಂದರೆ ಅದರೊಳಗೆ ತಲ್ಲೀನವಾಗಿರುವುದು ಎಂದರ್ಥವಾಗಿದ್ದು, ಸದಾ ಜ್ಞಾನದಲ್ಲಿ ತಲ್ಲೀನರಾಗಿರುವವರೇ ಭಾರತೀಯರು ಎಂದು ಸಂಸ್ಕೃತದಲ್ಲಿ ಉಲ್ಲೇಖಿತಗೊಂಡಿದೆ ಎಂದು ತಿಳಿಸಿದರು.
ಭಾರತೀಯ ಪರಂಪರೆಯಲ್ಲಿ ಮಾತೃ, ಪಿತೃ, ಆಚಾರ್ಯ, ಅತಿಥಿ ದೇವೋಭವ ಎಂದು ಹೇಳಲಾಗಿದೆ. ಮಕ್ಕಳಲ್ಲಿ ಧರ್ಮ, ಪರಂಪರೆ, ಸಂಸ್ಕಾರಗಳನ್ನು ರೂಢಿಸಬೇಕು ಎಂದು ಮುರುಘೇಂದ್ರ ಶಿವಯೋಗಿಗಳು ತಿಳಿಸಿದರು.