ನವದೆಹಲಿ: ಇಂದಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಬೆಳೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇದೇ ತಂತ್ರಜ್ಞಾನದ ನೆರವಿನಿಂದ ಎಷ್ಟು ಒಳ್ಳೆಯದು ಆಗುತ್ತಿದೆಯೋ ಅಷ್ಟೇ ಕೆಟ್ಟದ್ದೂ ಆಗುತ್ತಿದೆ. ಸ್ಮಾರ್ಟ್ಫೋನ್ ಬಂದ ಬಳಿಕ ಬದುಕು ಸುಲಭವಾಗಿರಬಹುದು ಆದರೆ, ಅಪಾಯಕ್ಕೂ ಸಿಲುಕಿದೆ. ಅದರಲ್ಲೂ ಸೈಬರ್ ವಂಚನೆಗಳು ಹೆಚ್ಚಿವೆ. ಸೈಬರ್ ವಂಚಕರಿಂದ ಅನೇಕ ಅಮಾಯಕರು ವಂಚನೆಗೆ ಒಳಗಾಗುತ್ತಿದ್ದಾರೆ. ಆದರೆ, ಕೆಲವರು ತಾವು ಮೋಸ ಹೋಗುತ್ತಿರುವುದನ್ನು ತಕ್ಷಣವೇ ಅರಿತು ವಂಚಕರಿಗೆ ಸರಿಯಾಗಿ ಬುದ್ಧಿ ಕಲಿಸುತ್ತಿದ್ದಾರೆ.
ಅದೇ ರೀತಿ ತನ್ನನ್ನು ವಂಚಿಸಲು ಬಂದ ವಂಚಕರಿಗೆ ಇಲ್ಲೊಬ್ಬ ಯುವತಿ ಸರಿಯಾಗಿ ಬುದ್ಧಿ ಮಾತು ಹೇಳಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಅಲ್ಲದೆ, ಯುವತಿಯ ಫೋನ್ ಕರೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಮಾರುಕಟ್ಟೆಯಲ್ಲಿನ ಹೊಸ ವಂಚನೆಯು ಬಯಲಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಸೈಬರ್ ವಂಚನೆಗಳು ನಡೆಯುತ್ತಿವೆ. ಇಂತಹ ವಂಚನೆಗಳನ್ನು ತಡೆಯಲು ಪೊಲೀಸರೂ ಸಹ ಹರಸಾಹಸ ಪಡುತ್ತಿದ್ದಾರೆ. ಮುಖವಾಡ ಧರಿಸಿರುವ ಸೈಬರ್ ವಂಚಕರನ್ನು ಪತ್ತೆಹಚ್ಚುವುದು ಸುಲಭವೇನಲ್ಲ. ಆದರೂ ನಮ್ಮ ಜನರು ಬಹಳ ಜಾಗೃತರಾಗಿದ್ದಾರೆ. ಹಾಗಾಗಿಯೇ ಈಗ ಸೈಬರ್ ಕ್ರಿಮಿನಲ್ಗಳೂ ಹೊಸ ಹೊಸ ದಾರಿಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ವಂಚನೆಯ ವಿಧಾನವೂ ಸಹ ದಿನದಿಂದ ದಿನಕ್ಕೆ ಬದಲಾಗುತ್ತಿದೆ.
ಇಲ್ಲಿಯವರೆಗೆ ಲಿಂಕ್ ಕಳಿಸಿ ಆಫರ್ ಬಂದಿದೆ ಎಂದು ಹೇಳಿ ಮೋಸ ಮಾಡುವುದನ್ನು ನೋಡಿದ್ದೇವೆ. ಇದರಿಂದ ಎಚ್ಚೆತ್ತ ಜನರು ವಂಚಕರ ಬಲೆಗೆ ಬೀಳುವುದನ್ನು ನಿಲ್ಲಿಸಿದರು. ಹಾಗಾಗಿಯೇ ಅರೆಕಾಲಿಕ ಉದ್ಯೋಗದ ಹೆಸರಿನಲ್ಲಿ ವಂಚಿಸಲು ಶುರು ಮಾಡಿದರು. ಆದರೆ, ಇತ್ತೀಚೆಗೆ ಪೊಲೀಸರ ಹೆಸರಲ್ಲಿ ವಂಚನೆ ಮಾಡಲು ಆರಂಭಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಒಬ್ಬರು ಈ ಹೊಸ ಹಗರಣವನ್ನು ಬೆಳಕಿಗೆ ತಂದಿದ್ದಾರೆ. ತಾನು ಎದುರಿಸಿದ ಈ ವಿಚಿತ್ರ ವಂಚನೆಯ ಬಗ್ಗೆ ವಿಡಿಯೋ ಮಾಡಿ ಎಲ್ಲರನ್ನೂ ಎಚ್ಚರಿಸಿದ್ದಾಳೆ.
ಚರಂಜೀತ್ ಕೌರ್ ಈಕೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಪ್ರಭಾವಿ ಮತ್ತು ಜಿಮ್ ಫ್ರೀಕ್ ಕೂಡ. ತಮ್ಮ ಜಿಮ್ ವಿಡಿಯೋಗಳು ಮತ್ತು ಸಹಜ ಸೌಂದರ್ಯದಿಂದ ಇನ್ಸ್ಟಾಗ್ರಾಂನಲ್ಲಿ ಸಾಕಷ್ಟು ಫಾಲೋವರ್ಸ್ ಸಂಪಾದಿಸಿದ್ದಾರೆ. ಒಂದು ದಿನ ಚರಂಜೀತ್ ಕೌರ್ಗೆ ಪೋಲೀಸರ ಫೋಟೋ ಇರುವ ನಂಬರ್ನಿಂದ ಕರೆ ಬಂದಿತು. ಫೋನ್ ಕೈಗೆತ್ತಿಕೊಂಡ ಚರಂಜೀತ್ ಕೌರ್ಗೆ ವಿಷಯ ಬೇಗ ಅರ್ಥವಾಯಿತು. ಕರೆ ಮಾಡಿದವರು ಚರಂಜೀತ್ ಕೌರ್ಳನ್ನು ಎಲ್ಲಿದ್ದೀರಾ ಎಂದು ಕೇಳಿದರು. ತಾನು ಮನೆಯಲ್ಲಿಲ್ಲ ಹೊರಗಡೆ ಇದ್ದೇನೆ ಎನ್ನುತ್ತಾರೆ. ಇದನ್ನು ಕೇಳುತ್ತಲೇ ವಂಚಕರು ತಮ್ಮ ಡ್ರಾಮಾ ಶುರು ಮಾಡುತ್ತಾರೆ. ನಿಮ್ಮ ಸಹೋದರಿ ಚರಂಜೀತ್ ಕೌರ್ಳನ್ನು ಬಂಧಿಸಿದ್ದೇವೆ ಎನ್ನುತ್ತಾರೆ. ಬಳಿಕ ಹೀಗೇಕೆ ಮಾಡಿದಿರಿ ಎಂದು ಪ್ರಶ್ನಿಸಿದರೆ, ಸಚಿವರೊಬ್ಬರ ಮಗನಿಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ಅದಕ್ಕಾಗಿಯೇ ಆಕೆಯನ್ನು ಬಂಧಿಸಲಾಯಿತು ಎಂದಿದ್ದಾರೆ.
ಚರಂಜೀತ್ ಕೌರ್ಳನ್ನು ಮಾಧ್ಯಮದ ಮುಂದೆ ನಿಲ್ಲಿಸುತ್ತೇವೆ. ಆಕೆ ಮಾಡಿದ್ದನ್ನು ಎಲ್ಲರಿಗೂ ಹೇಳುತ್ತೇವೆ. ಆಗ ನಿಮ್ಮ ಗೌರವವೆಲ್ಲ ಕಳೆದು ಹೋಗುತ್ತದೆ ಎಂದು ವಂಚಕರು ಎದುರಿಸುತ್ತಾರೆ. ತನ್ನ ಸಹೋದರಿಯೊಂದಿಗೆ ಮಾತನಾಡಬಹುದೇ ಎಂದು ಜೀತ್ ಕೌರ್ ಕೇಳುತ್ತಾಳೆ. ಅದು ಸಾಧ್ಯವಿಲ್ಲ, ಆಕೆಯನ್ನು ಬೇರೆ ಕಡೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ. ಆಕೆಯನ್ನು ಬಿಡುಗಡೆ ಮಾಡಬೇಕೆಂದರೆ ಏನು ಮಾಡಬೇಕು ಎಂದು ಕೇಳುತ್ತಾಳೆ. 20 ಸಾವಿರ ರೂಪಾಯಿಯನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಬೇಕು. ಈ ಬಗ್ಗೆ ಯಾರಿಗಾದರೂ ಹೇಳಿದರೆ ಇಡೀ ಪ್ರಕರಣವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಕೊನೆಗೆ ಕೋಪಗೊಳ್ಳುವ ಚರಂಜೀತ್ ಕೌರ್, ಶೂನಿಂದ ಹೊಡೆಯುತ್ತೇನೆ ಎಂದು ಕೂಗಾಡುತ್ತಾಳೆ. ನೀವು ಹೇಳುತ್ತಿರುವ ಆ ಚರಂಜೀತ್ ಕೌರ್ ಬೇರೆ ಯಾರೂ ಅಲ್ಲ ನಾನೇ ಎಂದು ಹೇಳುತ್ತಿದ್ದಂತೆಯೇ ಕರೆ ಮಾಡಿದ್ದ ವ್ಯಕ್ತಿ ಕಾಲ್ ಕಟ್ ಮಾಡಿದ್ದಾನೆ. ಇದಿಷ್ಟನ್ನು ರೆಕಾರ್ಡ್ ಮಾಡಿರುವ ಜೀತ್ಕೌರ್ ತನ್ನ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ವಿಡಿಯೋ ವೈರಲ್ ಆಗಿದ್ದು, ದೇಶಾದ್ಯಂತ ಭಾರೀ ಚರ್ಚೆಯೂ ನಡೆಯುತ್ತಿದೆ. (ಏಜೆನ್ಸೀಸ್)
ನಾಲ್ಕು ವರ್ಷದಿಂದ ಈ ವಿವಾಹಿತ ನಟನನ್ನು ಪ್ರೀತಿ ಮಾಡ್ತಿದ್ದಾರಂತೆ ಸೌತ್ ಬ್ಯೂಟಿ ಪ್ರಿಯಾ ಭವಾನಿ ಶಂಕರ್!
ಸ್ವಕ್ಷೇತ್ರದಲ್ಲೇ ಬೀಡುಬಿಟ್ಟ ಸಚಿವರು: ಫ್ಯಾಮಿಲಿ ಪಾಲಿಟಿಕ್ಸ್ ಎಫೆಕ್ಟ್, ಮಕ್ಕಳು, ಸಂಬಂಧಿಕರ ಗೆಲುವಿಗೆ ಹೆಣಗಾಟ