ಬೆಂಗಳೂರು: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಾಜ್ಯದಲ್ಲಿ ಥಂಡಿ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ಜನರು ಬೆಚ್ಚಗಿನ ಉಡುಪು ಮತ್ತು ಬಿಸಿ ಆಹಾರಕ್ಕೆ ಮೊರೆ ಹೋಗಿದ್ದಾರೆ.
ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಮೋಡಗಳು ಮುಸುಕಿದ ಪರಿಣಾಮ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತಗೊಂಡಿದೆ.ಇದರಿಂದ ಜನರು ಮಳೆ ಜತೆಗೆ ಚಳಿಯನ್ನೂ ಅನುಭವಿಸುವಂತಾಗಿದೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ಜೋರಾಗಿ ಮಳೆ ಬೀಳುತ್ತಿದ್ದರೆ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುತ್ತಿದೆ. ಬೆಳಗ್ಗೆ ಮತ್ತು ರಾತ್ರಿ ಅವಧಿಯಲ್ಲಿ ಜನರಿಗೆ ಚಳಿ ಅನುಭವವಾಗುತ್ತಿದೆ. ಜತೆಗೆ ಶೀತಗಾಳಿ ಬೀಸುತ್ತಿದೆ. ಅಲ್ಲದೆ, ದಿನದಿಂದ ದಿನಕ್ಕೆ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯಿಂದ ಶೀತ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸಿವೆ.
ಹಂಪೆಯಲ್ಲಿ 9 ಡಿಗ್ರಿ, ಬೀದರ್, ಬಳ್ಳಾರಿ ಮತ್ತು ಕಲಬುರಗಿಯಲ್ಲಿ ತಲಾ 7 ಡಿಗ್ರಿ, ಗದಗ ಮತ್ತು ರಾಯಚೂರು ತಲಾ 6 ಡಿಗ್ರಿ, ಮಂಗಳೂರು, ಕಾರವಾರ, ಗೋಕಾರ್ಣ, ಚಿತ್ರದುರ್ಗ ಮತ್ತು ಬೆಳಗಾವಿಯಲ್ಲಿ ತಲಾ 4 ಡಿಗ್ರಿ, ಬೆಂಗಳೂರು, ಹೊನ್ನಾವರ, ಮಡಿಕೇರಿ ಹಾಗೂ ವಿಜಯಪುರದಲ್ಲಿ ತಲಾ 3 ಡಿಗ್ರಿ, ಮಂಡ್ಯ ಮತ್ತು ಮೈಸೂರಿನಲ್ಲಿ ತಲಾ 2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ ಇಳಿಕೆಯಾಗಿದೆ. ಅಲ್ಲದೆ, ಗರಿಷ್ಠ ತಾಪಮಾನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳು 27 ಡಿಗ್ರಿ-29 ಡಿಗ್ರಿ ಸೆಲ್ಸಿಯಸ್ ಅಸುಪಾಸುನಲ್ಲಿವೆ.
ಮುಂಗಾರು ಶುರುವಾಗಿ 40 ದಿನಗಳಾಗಿವೆ. ಬೇಸಿಗೆಯಿಂದ ಮಳೆಗಾಲವಾಗಿ ಬದಲಾಗಿದೆ. ಅರಬ್ಬಿ ಸಮುದ್ರದಿಂದ ರಾಜ್ಯದ ಕಡೆಗೆ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಚಳಿ ಅನುಭವ ಇದೆ. ಮಳೆಗಾಲದ ವೇಳೆ ಹವಾಮಾನದಲ್ಲಿ ಸಾಮಾನ್ಯವಾಗಿ ಇವೆಲ್ಲಾ ಏರುಪೇರು ಆಗುವುದು ಸಾಮಾನ್ಯ ಎನ್ನುತ್ತಾರೆ ಹವಾಮಾನ ವೈಪರಿತ್ಯ ವಿಜ್ಞಾನಿ ಡಾ.ಎಂ. ಬಿ.ರಾಜೇಗೌಡ.
ರಾಜ್ಯದಲ್ಲಿ ಮಳೆ ಮುಂದುವರಿಕೆ: ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ ಇನ್ನೂ 5 ದಿನ ಮುಂದುವರಿಯಲಿದೆ. ಶನಿವಾರ ಕರಾವಳಿ ಭಾಗದಲ್ಲಿ ಸರಾಸರಿ 19 ಸೆಂಮೀ ಮಳೆಯಾಗಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಮುಂದಿನ 48 ಗಂಟೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಕೊಟ್ಟಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಜು.10 ಮತ್ತು 11 ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಹಾವೇರಿ, ಧಾರವಾಡ, ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ ಮತ್ತು ವಿಜಯಪುರದಲ್ಲಿ ಜು.10ರಿಂದ ಮುಂದಿನ ಮೂರು ದಿನ ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಬೀಳಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ,ಈ ಕಾರಣಕ್ಕೆ ಉದ್ಧವ್ ಸರ್ಕಾರ ಉಳಿಯಲಿಲ್ಲ: ಸಿಎಂ ಶಿಂಧೆ