More

    ರಾಗಿ ಮಾಲ್ಟ್ ಸೇವನೆಯಿಂದ ಆರೋಗ್ಯ ವೃದ್ಧಿ

    ಚಿಕ್ಕಮಗಳೂರು: ರಾಗಿ ಮಾಲ್ಟ್ ಸೇವನೆಯಿಂದ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗುವ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ. ಇದರಿಂದ ಓದಿನಲ್ಲಿ ಚುರುಕಾಗುವ ಮೂಲಕ ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.

    ನಗರದ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಶ್ರೀಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಹಾಗೂ ಕೆಎಂಎಫ್ ಸಂಸ್ಥೆ ಆಶ್ರಯದಲ್ಲಿ ಗುರುವಾರ ಸಾಯಿ ಶ್ಯೂರ್ ರಾಗಿ ಹೆಲ್ತ್ಮಿಕ್ಸ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ ವಿತರಣೆ ಪ್ರಾರಂಭಿಸಲಾಗಿದೆ. ಉತ್ತಮ ಪೌಷ್ಠಿಕಾಂಶ ಶಿಕ್ಷಣಕ್ಕೆ ರಹದಾರಿಯಾಗಲಿದೆ. ಈ ಹಿಂದೆ ವಾರಕ್ಕೆರಡು ಮೊಟ್ಟೆ ಕೊಡುವ ಕಾರ್ಯಕ್ರಮ ರೂಪಿಸಲಾಗಿತ್ತು. ಇದೀಗ ರಾಗಿ ಮಾಲ್ಟ್ ಕೊಡುವ ಕಾರ್ಯಕ್ರಮ ಇಂದಿನಿಂದ ಆರಂಭಗೊಂಡಿದೆ ಎಂದು ತಿಳಿಸಿದರು.
    ಮಕ್ಕಳು ಬಾಲ್ಯದಲ್ಲಿ ಪೌಷ್ಠಿಕ ಆಹಾರಗಳಾದ ರಾಗಿ, ಮೊಟ್ಟೆ, ಹಾಲು, ತರಕಾರಿ ಸೇರಿದಂತೆ ಇನ್ನಿತರೆ ಪದಾರ್ಥಗಳ ಬಗ್ಗೆ ಅಸಡ್ಡೆ ತೋರುತ್ತಾರೆ. ಕಾಲಕ್ರಮೇಣ ಅವುಗಳ ಮಹತ್ವ ತಿಳಿಯುತ್ತದೆ. ಹೀಗಾಗಿ ಆರೋಗ್ಯವಂತ ಶರೀರಕ್ಕೆ ಪೌಷ್ಠಿಕ ಆಹಾರ ಸೇವಿಸುವುದು ಒಳ್ಳೆಯದು. ಇದರಿಂದ ಭವಿಷ್ಯದ ಬದುಕಿನಲ್ಲಿ ಇನ್ನಷ್ಟು ಸದೃಢವಾಗಿರಲು ಸಾಧ್ಯ ಎಂದು ಸಲಹೆ ನೀಡಿದರು.
    ಇತ್ತೀಚಿನ ದಿನಗಳಲ್ಲಿ ಶಾಲಾಮಕ್ಕಳಿಗೆ ಆರೋಗ್ಯ ಪರೀಕ್ಷೆ ಮಾಡಿದ ಸಂದರ್ಭದಲ್ಲಿ ರಕ್ತಹೀನತೆ, ಅಪೌಷ್ಠಿಕತೆ ಕಾಡುತ್ತಿರುವುದು ಕಂಡು ಬರುತ್ತಿದೆ. ಇವುಗಳನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಹಾಲು, ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ಬಳಿಕ ಇದೀಗ ರಾಗಿ ಮಾಲ್ಟ್ ವಿತರಬೆ ಮಾಡಲಾಗುತ್ತಿದೆ. ಈ ಎಲ್ಲ ಸೌಲಭ್ಯಗಳನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
    ಕಾಲೇಜಿನ ಪ್ರಾಚಾರ್ಯ ವೀರೂಪಾಕ್ಷಪ್ಪ ಮಾತನಾಡಿ, ಆರೋಗ್ಯಕ್ಕೆ ಪೂರಕವಾದ ಪದಾರ್ಥಗಳನ್ನು ಸೇವಿಸುವುದು ಅತಿಮುಖ್ಯ. ವಿದ್ಯಾರ್ಥಿಗಳು ಗುಣಮಟ್ಟದ ಆಹಾರದ ಬಗ್ಗೆ ಅಸಡ್ಡೆ ತೋರಬಾರದು. ರುಚಿ ಕಡಿಮೆಯಿದ್ದರೂ ಕೂಡಾ ಪರಿಪೂರ್ಣ ಆರೋಗ್ಯಕ್ಕೆ ಸಹಕಾರಿಯಾಗುವಂಥ ಆಹಾರವನ್ನೇ ಸೇವಿಸಬೇಕು. ಹೀಗಾಗಿ ಹಾಲು, ಮೊಟ್ಟೆ ಹಾಗೂ ರಾಗಿಯ ವಿವಿಧ ರೀತಿಯ ಪದಾರ್ಥಗಳನ್ನು ಸೇವಿಸುವುದು ಉತ್ತಮ ಎಂದು ತಿಳಿಸಿದರು.
    ಇತ್ತೀಚೆಗೆ ನಮ್ಮ ಶಾಲೆಯ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿದಾಗ ೧೮೦ಕ್ಕೂ ಹೆಚ್ಚು ಮಕ್ಕಳಲ್ಲಿ ರಕ್ತಹೀನತೆ ಕಂಡುಬಂದಿತ್ತು. ಇದರಲ್ಲಿ ಮೂವರು ವಿದ್ಯಾರ್ಥಿಗಳು ತೀವ್ರ ಸ್ವರೂಪದ ಸಮಸ್ಯೆ ಅನುಭವಿಸುತ್ತಿದ್ದರು. ಆ ಮಕ್ಕಳ ಪಾಲಕರಿಗೆ ಈ ಬಗ್ಗೆ ತಿಳಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಯಿತು. ಹೀಗಾಗಿ ಮಕ್ಕಳು ಮೊದಲು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ಹೇಳಿದರು.
    ಜಿಪಂ ಪ್ರಧಾನಮಂತ್ರಿ ಪೋಷಣ್‌ಶಕ್ತಿ ನಿರ್ಮಾಣ ಎಂಡಿಎಂ ಶಿಕ್ಷಣಾಧಿಕಾರಿ ವೈ.ಬಿ.ಸುಂದರೇಶ್ ಮಾತನಾಡಿ, ಮಕ್ಕಳಲ್ಲಿ ರಕ್ತಹೀನತೆ ಇರಬಾರದು. ಭವಿಷ್ಯಕ್ಕೆ ಉತ್ತಮ ಪ್ರಜೆ ನೀಡುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ೧ ರಿಂದ ೧೦ ತರಗತಿಯ ಸುಮಾರು ೭೮ ಸಾವಿರ ಮಕ್ಕಳಿಗೆ ರಾಗಿ ಮಾಲ್ಟ್ ವಿತರಣೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಇದೇ ವೇಳೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸುಮಾರು ೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಗಿಮಾಲ್ಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.ಕಿರಣ್‌ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಬಿ.ಕೆ.ಸದಾಶಿವಮೂರ್ತಿ, ಮಾಜಿ ಅಧ್ಯಕ್ಷ ಪ್ರಭಾಕರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಡಿ.ಪ್ರಶಾಂತಿನಿ, ಸದಸ್ಯೆ ಕುಸುಮ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts