ಯಲಬುರ್ಗಾ: ಹದಿಹರೆಯದ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಸಕಾಲಕ್ಕೆ ಚಿಕಿತ್ಸೆ ಪಡೆಯುವುದು ಅವಶ್ಯವಾಗಿದೆ ಎಂದು ದಂತ ವೈದ್ಯ ಎಂ.ಮಾರುತಿ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಡಿ ಗುರುವಾರ ಹಮ್ಮಿಕೊಂಡಿದ್ದ ಸ್ನೇಹಿ ಗುಂಪಿನ ಶಿಕ್ಷಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ಓವರ್ನಲ್ಲಿ ಸತತ ಆರು ಸಿಕ್ಸರ್; ದೇಶೀಯ ಕ್ರಿಕೆಟ್ನಲ್ಲಿ ಹೊಸ ಸಾಧನೆ ಮಾಡಿದ ಯುವ ಬ್ಯಾಟ್ಸ್ಮನ್
ಹದಿಹರೆಯದವರು ಆರೋಗ್ಯದ ಕಡೆಗೆ ಹೆಚ್ಚು ಒತ್ತು ನೀಡಬೇಕು. ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಚಿಕ್ಕಮಕ್ಕಳ ತಜ್ಞೆ ಕೆ.ಮೀನು ಮಾತನಾಡಿ, ಕಿಶೋರಿಯರು ಋತುಚಕ್ರ ಸಮಯದಲ್ಲಿ ಮುಜುಗರಕ್ಕೆ ಒಳಗಾಗದೆ ಸ್ನೇಹಾ ಕ್ಲಿನಿಕ್ನಲ್ಲಿ ಚಿಕಿತ್ಸೆ ಹಾಗೂ ಸೇವೆ ಪಡೆಯಬೇಕು ಎಂದರು. ಆಯುಷ್ ವೈದ್ಯಾಧಿಕಾರಿ ಶೇಖರ ಭಜಂತ್ರಿ, ಸಹಾಯಕ ಆಡಳಿತ ಅಧಿಕಾರಿ ಚಂದ್ರಶೇಖರ ಅಣ್ಣಿಗೇರಿ, ಹದಿಹರೆಯದವರ ಆಪ್ತಸಮಾಲೋಚಕ ಶರಣಪ್ಪ ಉಪ್ಪಾರ, ಐಸಿಟಿಸಿ ಆಪ್ತಸಮಾಲೋಚಕ ಕಾಳಪ್ಪ ಬಡಿಗೇರ್, ಆರೋಗ್ಯ ಸಿಬ್ಬಂದಿ ಸೇರಿ ಇತರರಿದ್ದರು.