ಹೊಸಪೇಟೆ: ವಿಜಯನಗರ ಜಿಲ್ಲೆ ಹಿಂದುಳಿದಿದ್ದು, ಬೇರು ಮಟ್ಟದಿಂದ ಇಲಾಖಾವಾರು ಪ್ರಗತಿ ಅವಶ್ಯವಾಗಿದೆ. ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಕರ್ತವ್ಯನಿರ್ವಹಿಸಬೇಕು ಎಂದು ನೂತನ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಗಳ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ ಹಾಗೂ ವಸತಿ ನಿಲಯಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ತೋರಬೇಕು ಎಂದು ನಿರ್ದೇಶಿಸಿದರು.
ಇದನ್ನೂ ಓದಿ:https://www.vijayavani.net/forest-act-amendment-opposition
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿ ಸರ್ಕಾರಿ, ಅನುದಾನಿತ ಶಾಲೆಗಳ ವಿವರ, ವಿದ್ಯಾರ್ಥಿಗಳ ದಾಖಲಾತಿ ಬಗ್ಗೆ ಮಾಹಿತಿ ಪಡೆದ ಡಿಸಿ ದಿವಾಕರ, ಮಕ್ಕಳಿಗೆ ವಿಟಮಿನ್ ಸಿ ಮತ್ತು ಡಿ ಅವಶ್ಯಕತೆ ಹೆಚ್ಚಿದ್ದು, ಶಾಲಾ ಆವರಣದಲ್ಲಿ ಕರಿಬೇವು, ನಿಂಬೆಹಣ್ಣು ಗಿಡಗಳನ್ನು ಬೆಳೆಸಬೇಕು ಎಂದು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಂಗನವಾಡಿಗೆ ದಾಖಲಾದ ಮಕ್ಕಳು, ಲಿಂಗಾನುಪಾತ, ಗರ್ಭಿಣಿಯರ ಮಾಹಿತಿ ಮಾಹಿತಿ ಸಹ ಪಡೆದರು. ಆರೋಗ್ಯ ಇಲಾಖೆಯಲ್ಲಿ ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಔಷಧಗಳ ದಾಸ್ತಾನು, ಸೌಲಭ್ಯ, ಚಿಕಿತ್ಸೆ ವಿವರ ಪಡೆದುಕೊಂಡರು.
ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವಂತೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಹೆರಿಗೆಗೆ ಸಂಬಂಧಿಸಿದಂತೆ ಟಾರ್ಗೆಟ್ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂಗೆ ಡಿಸಿ ದಿವಾಕರ ಸೂಚಿಸಿದರು.
ಉಸ್ತುವಾರಿ ಸಚಿವರಿಂದ ಸಭೆ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹಮದ್ ಖಾನ್ ಅಧ್ಯಕ್ಷತೆಯಲ್ಲಿ ಆಗಸ್ಟ್ 9 ರಂದು ಹೊಸಪೇಟೆ, 10 ರಂದು ಹರಪನಹಳ್ಳಿ, 11ಕ್ಕೆ ಹಗರಿಬೊಮ್ಮನಹಳ್ಳಿ, 12ರಂದು ಹೂವಿನಹಡಗಲಿ ಹಾಗೂ 14ರಂದು ಕೂಡ್ಲಿಗಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಎಲ್ಲ ಇಲಾಖೆ ಅಧಿಕಾರಿಗಳು ಅಗತ್ಯ ವರದಿಗಳೊಂದಿಗೆ ಹಾಜರಾಗಬೇಕು ಎಂದು ಡಿಸಿ ದಿವಾಕರ ನಿರ್ದೇಶಿಸಿದರು.