ನವದೆಹಲಿ: ಪಾಕಿಸ್ತಾನದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2500ಕ್ಕೆ ಏರಿದೆ. ಅಲ್ಲಿ ಲಾಕ್ಡೌನ್ ಇಲ್ಲ, ಸೂಕ್ತ ನಿಯಂತ್ರಣಾ ಕ್ರಮಗಳಿಲ್ಲ, ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವೂ ನಡೆಯುತ್ತಿಲ್ಲ. ಲಾಕ್ಡೌನ್ನಿಂದ ಕರೊನಾ ನಿಯಂತ್ರಣಕ್ಕೆ ಬರುತ್ತದೆ ಎಂದು ನನಗೆ ನಂಬಿಕೆ ಇಲ್ಲ ಎಂದಿರುವ ಪಾಕಿಸ್ತಾನ ಪ್ರಧಾನಿಯ ಕಣ್ಣು, ಬಾಯಿಯೆಲ್ಲ ಭಾರತದ ಕಡೆಗೇ ಇದೆ.
ಇಂತಹ ಕರೊನಾ ಸಂದಿಗ್ಧ ಕಾಲದಲ್ಲೂ ಕೂಡ ಭಾರತ, ಆರ್ಎಸ್ಎಸ್, ಬಿಜೆಪಿ, ನಾಜಿಗಳ ಬಗ್ಗೆ ಟ್ವೀಟ್ ಮಾಡಿ, ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಷ್ಟಕ್ಕೂ ಸದ್ಯ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಡುವೆ ಈಗ ಟ್ವಿಟರ್ ವಾರ್ ನಡೆಯುತ್ತಿರಲು ಕಾರಣ ಏನು ಎಂಬ ಬಗ್ಗೆ ಕುತೂಹಲ ಇದ್ದರೆ ಮುಂದೆ ಓದಿ…
ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಇತ್ತೀಚೆಗೆ ಯುಎಸ್ ಮೂಲದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಇಂಟರ್ವ್ಯೂ ಮಾಡುತ್ತಿದ್ದ ಜರ್ನಲಿಸ್ಟ್, ಸುಬ್ರಹ್ಮಣಿಯನ್ ಸ್ವಾಮಿ ಬಳಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಭಾರತದಲ್ಲಿರುವ ಮುಸ್ಲಿಂ ಸಮುದಾಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಸ್ವಾಮಿ, ಭಾರತದಲ್ಲಿ ಬಹುಕಾಲದಿಂದಲೂ ಪೆಂಡಿಂಗ್ ಇದ್ದಿದ್ದ ಬಿಲ್ ಇದಾಗಿತ್ತು ಎಂದು ಹೇಳಿ, ಸಿಎಎ ಬಿಲ್ ಪಾಸ್ ಆಗಿದ್ದು, ಅದು ಕಾಯ್ದೆ ಆಗಿ ಬದಲಾದ ಬಗ್ಗೆ ವಿವರಿಸಿದರು.
ಹಾಗೇ ಮಾತನಾಡುತ್ತ ಶೇ.30 ಹಾಗೂ ಅದಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಮುಸ್ಲಿಂ ಸಮುದಾಯವನ್ನು ಹೊಂದಿರುವ ಎಲ್ಲ ದೇಶಗಳೂ ಅಪಾಯದಲ್ಲಿವೆ. ಆ ದೇಶಗಳು ಯಾವವು ಎಂದೂ ನಮಗೆ ಗೊತ್ತು. ಇಸ್ಲಾಂ ಸಿದ್ಧಾಂತವೇ ಹಾಗಿದೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಈ ಇಂಟರ್ವ್ಯೂದಲ್ಲಿ ಹೇಳಿದ್ದಾರೆ.
ಸುಬ್ರಹ್ಮಣಿಯನ್ ಸ್ವಾಮಿಯವರು ಮುಸ್ಲಿಮರ ಬಗ್ಗೆ ಮಾತನಾಡಿದ್ದ ಸಂದರ್ಶನದ ವಿಡಿಯೋ ಕ್ಲಿಪ್ನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಈ ಆರ್ಎಸ್ಎಸ್ ಪ್ರಭಾವಿತ, 21ನೇ ಶತಮಾನದ ಬಿಜೆಪಿ ನಾಯಕ 200 ಮಿಲಿಯನ್ ಮುಸ್ಲಿಮರ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು. ಹಾಗೇ ಬಿಜೆಪಿಯನ್ನು ನಾಜಿಗಳಿಗೆ, ಮುಸ್ಲಿಮರನ್ನು ಯಹೂದಿಗಳಿಗೆ ಹೋಲಿಸಿದ್ದರು.
ಅದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಖಂಡಿತವಾಗಿಯೂ ಹೇಳುತ್ತೇನೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ಗೆ ಮಾಡಲು ಏನೂ ಕೆಲಸವೇ ಇಲ್ಲ. ಅವರಿಗೆ ಪಾಕ್ ಸೈನ್ಯ ಮತ್ತು ಐಎಸ್ಐ ನೀಡಿದ ಒಂದೂ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಭಾರತದ ವಿರುದ್ಧ ಆರೋಪ ಮಾಡುವುದನ್ನು, ಕೆಟ್ಟದಾಗಿ ಮಾತನಾಡುವುದನ್ನು ಬಿಟ್ಟು ಬೇರೇನೂ ತೋಚುತ್ತಿಲ್ಲ ಎಂದು ಕುಟುಕಿದ್ದಾರೆ.
ಪಾಕಿಸ್ತಾನದಲ್ಲಿ ಹಿಂದು ಮತ್ತು ಸಿಖ್ರ ಮೇಲೆ ದೌರ್ಜನ್ಯ ಮಿತಿಮೀರಿದೆ. ಅವರಿಗೆ ಆಹಾರ ನೀಡಲು ನಿರಾಕರಿಸುತ್ತಿರುವುದನ್ನು ನೋಡಿದರೆ ನರಮೇಧದಿಂದ ಒಂದೇ ಹೆಜ್ಜೆ ದೂರದಲ್ಲಿದ್ದಂತೆ ಕಾಣುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.(ಏಜೆನ್ಸೀಸ್)
He obviously has no work assigned to him as PM by the Pak military and ISI except to bad mouth India. The treatment of Hindus and Sikhs today in Pakistan especially denying them food is one step away from genocide
— Subramanian Swamy (@Swamy39) April 3, 2020