More

    ನೈಸರ್ಗಿಕ ಸಂಪನ್ಮೂಲ ನೀರನ್ನು ಮಿತವಾಗಿ ಬಳಸಿ; ವಿಶ್ವ ಜಲ ದಿನ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಪುಟ್ಟರಾಜು ಸಲಹೆ

    ಹಾವೇರಿ: ಭೂಮಿ ಮೇಲಿನ ಸಕಲ ಜೀವಿಗಳಿಗೂ ನೀರು ಅಗತ್ಯವಾಗಿ ಬೇಕಾಗಿರುವ ನೈಸರ್ಗಿಕ ಸಂಪನ್ಮೂಲವಾಗಿದೆ. ನೀರನ್ನು ಮಿತವಾಗಿ ಹಿತವಾಗಿ ಬಳಸುವ ಮೂಲಕ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.
    ನಗರದ ಸಿಂಧಗಿ ಶಾಂತವೀರೇಶ್ವರ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಪ್ರಕೃತಿಯ ಭೂಭಾಗದಲ್ಲಿ ಶೇ.70ರಷ್ಟು ನೀರಿನ ಪ್ರದೇಶವಿದ್ದು, ಶೇ.30ರಷ್ಟು ಮಾತ್ರ ಭೂಮಿ ಇದೆ. ಶೇ.70ರಷ್ಟು ನೀರಿನ ಪೈಕಿ ಶೇ.3ರಷ್ಟು ಮಾತ್ರ ನೀರು ಉಪಯೋಗಕ್ಕೆ ಬರುತ್ತದೆ. ಉಳಿದ ಶೇ.67ರಷ್ಟು ನೀರು ಅನುಪಯುಕ್ತವಾಗಿದೆ. ಶೇ.3ರಷ್ಟು ನೀರಿನ ಪ್ರಮಾಣದಲ್ಲಿ ಮಾನವ ಸಂಕುಲ, ಪ್ರಾಣಿ ಸಂಕುಲ ಹಾಗೂ ಸಸ್ಯ ಸಂಕುಲಗಳಿಗೆ ಉಪಯೋಗಿಸಲಾಗುತ್ತಿದೆ. ಪ್ರಕೃತಿದತ್ತವಾಗಿ ಲಭ್ಯವಿರುವ ನೀರನ್ನು ವ್ಯರ್ಥವಾಗಿ ಪೋಲು ಮಾಡದೆ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.
    ಸಿಂದಗಿ ಶಾಂತವೀರೇಶ್ವರ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಎಚ್.ಕೆ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಲಕ್ಷ್ಮೀಕಾಂತ ನೀರಿನ ಮಹತ್ವ ಹಾಗೂ ಸದ್ಬಳಕೆ ಕುರಿತು ಉಪನ್ಯಾಸ ನೀಡಿದರು.
    ಕಾರ್ಯಕ್ರಮದಲ್ಲಿ ಸಿಂದಗಿ ಶಾಂತವೀರೇಶ್ವರ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ.ಸಿ.ಎನ್.ಗೌಡರ ಹಾಗೂ ಎನ್.ಎಸ್.ಎಸ್. ಸಂಯೋಜಕ ಡಾ.ಸಂಗಮೇಶ್ವರ ದೊಡ್ಡಗೌಡರ, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts