ಹಾವೇರಿ: ನಗರದ ಸಿಂದಗಿ ಮಠದ ಲಿಂ.ಶಾಂತವೀರ ಪಟ್ಟಾಧ್ಯಕ್ಷರ 44ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಮಾ.4ರಿಂದ ಮಾ.10ರವರೆಗೆ ಶ್ರೀಮಠದಲ್ಲಿ ಜರುಗಲಿದೆ. ಮಾ.4ರಂದು ಸಂಜೆ 7.30ಕ್ಕೆ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಾರಿಹಾಳ ಅಡವಿಸಿದ್ದೇಶ್ವರ ಮಠದ ಅಡವೀಶ್ವರ ದೇವರು ಪ್ರತಿದಿನ ಮಹಾತ್ಮರ ಜೀವನ ದರ್ಶನ ಪ್ರವಚನ ನಡೆಸಿಕೊಡಲಿದ್ದಾರೆ.
ಮಾ.5ರಂದು ಸಂಜೆ 7.30ರಂದು ಧಾರ್ಮಿಕ ಕಾರ್ಯಕ್ರಮದಲ್ಲಿ ತೊಗರ್ಸಿ ಮಳೇಹಿರೇಮಠದ ಗುರುಬಸವ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ಹುಬ್ಬಳ್ಳಿಯ ಹಿಂದುಸ್ಥಾನಿ ಗಾಯಕಿ ರೇಖಾ ಹೆಗಡೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮಾ.6ರಂದು ಸಂಜೆ 7.30ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತವೀರ ಶಿವಾಚಾರ್ಯರು ವಹಿಸಲಿದ್ದಾರೆ. ಗದಗ ವಿರೇಶ್ವರ ಪುಣ್ಯಾಶ್ರಮದ ರಾಹುಲ ರಾಠೋಡ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮಾ.7ರಂದು ಸಂಜೆ.7.30ಕ್ಕೆ ನಡೆಯುವ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೈರನಹಟ್ಟಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ವಹಿಸಲಿದ್ದು, ನರೇಗಲ್ ನಿವೃತ್ತ ಮುಖ್ಯೋಪಾಧ್ಯಾಯ ಅರುಣ ಕುಲಕರ್ಣಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಲಿದೆ. ಮಾ.8ರಂದು ಮಹಾಶಿವರಾತ್ರಿ ನಿಮಿತ್ತ ಸಂಜೆ 8.30ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ವಹಿಸಲಿದ್ದಾರೆ. ಹಾವೇರಿಯ ಕುಮಾರ, ತುಷಾರ ರವೀಂದ್ರ ಮಾಳಗಿ ಅವರಿಂದ ಭಕ್ತಿ ಸಂಗೀತ ನಡೆಯಲಿದೆ.
ಮಾ.9ರಂದು ಸಂಜೆ 7.30ಕ್ಕೆ ಜರುಗುವ ಕಾರ್ಯಕ್ರಮದಲ್ಲಿ ಆನಂದಪುರ ಮುರುಘಾಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕಲಾವಿದ ಜ್ಞಾನೇಶ ಬಳ್ಳಾರಿ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಾಧಕರಿಗೆ ಸನ್ಮಾನ ನಡೆಯಲಿದೆ.
ಮಾ.10ರಂದು ಬೆಳಗ್ಗೆ ಸಿಂದಗಿ ಗುರುಗಳ ಗದ್ದುಗೆಗೆ ರುದ್ರಾಭೀಷೇಕ, ಬಿಲ್ವಾರ್ಚನೆ ಜರುಗಲಿದೆ. ಸಂಜೆ 7.30ಕ್ಕೆ ಗದುಗಿನ ಲಿಂ.ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿಗಳ ಪುಣ್ಯಸ್ಮರಣೆ ಹಾಗೂ ಪ್ರವಚನ ಮಂಗಲ ಕಾರ್ಯಕ್ರಮ ಜರುಗಲಿದೆ. ಡಂಬಳ-ಗದಗ ತೋಂಟದಾರ್ಯಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಿಂದಗಿ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ. ಬಳ್ಳಾರಿಯ ಪ್ರಕಾಶ ಮತ್ತು ನೇತ್ರಾವತಿ ಹೆಮ್ಮಾಡಿ ಅವರು ವಿಶೇಷ ಜಾದೂ ಪ್ರದರ್ಶನ ನೀಡಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಉಚಿತ ಆರೋಗ್ಯ ತಪಾಸಣೆ
ಮಾ.7ರಂದು ಬೆಳಗ್ಗೆ 10.30ಕ್ಕೆ ಶ್ರೀಮಠದಲ್ಲಿ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಹುಬ್ಬಳ್ಳಿ ಜನಪ್ರಿಯ ಕಣ್ಣಿನ ಆಸ್ಪತ್ರೆ ಹಾಗೂ ಹಾವೇರಿಯ ಸೃಜನ್ ಆಪ್ಟಿಕಲ್ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಜರುಗಲಿದೆ.