ಹಾವೇರಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹಾನಗಲ್ಲ ತಾಲೂಕಿನ ಆಡೂರ ಗ್ರಾಮದ ಮುಸಲ್ಮಾನರು ಗ್ರಾಮದ ಉರುಸು ಸಂದರ್ಭದಲ್ಲಿ ಕೇಸರಿ ಶಾಲು ಧರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು.
ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉರುಸು ಆಯೋಜಿಸಲಾಗಿತ್ತು. ರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಊರಿನ ಹಿರಿಯರೆಲ್ಲ ಸೇರಿ ಭಾವೈಕ್ಯತೆ ಸಾರುವ ಉದ್ದೇಶದಿಂದ ಹಿಂದು- ಮುಸ್ಲಿಮರೆಲ್ಲ ಒಂದಾಗಿ ಬಿಳಿ ಬಟ್ಟೆ ಧರಿಸಿ, ಕೇಸರಿ ಶಾಲು ಧರಿಸಿ ಉರುಸಿನಲ್ಲಿ ಪಾಲ್ಗೊಂಡರು. ದರ್ಗಾದ ವತಿಯಿಂದಲೇ ಸುಮಾರು 200 ಕೇಸರಿ ಶಾಲು ತರಿಸಿದ್ದ ಆಯೋಜಕರು ಹಿಂದು- ಮುಸಲ್ಮಾನರಿಗೆ ಶಾಲು ಹಾಕುವ ಮೂಲಕ ಗಮನ ಸೆಳೆದರು.
ಉರುಸಿನಲ್ಲಿ ಗ್ರಾಮದ ಹಿರಿಯರಾದ ಮಹಬೂಬಅಲಿ ಕರ್ಪೂಮಿಯನವರ, ಜಾಫರ್ಸಾಬ ಬಡಗಿ, ರಫೀಕ್ ಮುಲ್ಲಾ, ಸಿದ್ದಲಿಂಗಪ್ಪ ಶಂಕರಿಕೊಪ್ಪ, ಶಿವಾನಂದ ಸಂಗೂರಮಠ, ಶಾಂತಪ್ಪ ತಿಪ್ಪಲಾಪುರ, ಗ್ರಾಪಂ ಅಧ್ಯಕ್ಷ ಮಾಲತೇಶ ಬಾರ್ಕಿ, ನಾಗಪ್ಪ ಪೊಲಿಸಿ, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಭಾವೈಕ್ಯತೆಯ ಸಂದೇಶ :
ಇತ್ತೀಚೆಗಷ್ಟೇ ಹಾನಗಲ್ಲ ತಾಲೂಕಿನಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ಉರುಸಿನಲ್ಲಿ ಮುಸ್ಲಿಂ ಮುಖಂಡರ ಈ ನಡೆ ಜಿಲ್ಲೆಯ ಜನತೆಯಲ್ಲಿ ಮತ್ತೆ ಭಾವೈಕ್ಯತೆಯ ಸಂದೇಶ ಸಾರಿದೆ.