ಹಾವೇರಿ: ಹಾನಗಲ್ಲ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಆರೋಗ್ಯ ಹದಗೆಟ್ಟಿದೆ. ಸಂಕಷ್ಟವನ್ನು ಯಾರೂ ಕೇಳುತ್ತಿಲ್ಲ ಎಂದು ಆಕೆಯ ಸಹೋದರ ಅಜೀಜ್, ಸಂಬಂಧಿಗಳಾದ ಸೈಯದ್ ಬಶೀರ್, ರಹೀಮಾ, ದಿಲ್ನವಾಜ್ ಆರೋಪಿಸಿದರು. ಪೊಲೀಸರು ಹಾವೇರಿಯ ಸಾಂತ್ವನ ಕೇಂದ್ರದಿಂದ ಯಾರಿಗೂ ಹೇಳದೇ ಕೇಳದೇ ಶಿರಸಿ ಬಳಿಯ ಮನೆಗೆ ಕರೆದುಕೊಂಡು ಬಿಟ್ಟಿದ್ದಾರೆ. ಆಕೆಯ ನೋವು ಆಲಿಸಲು ಯಾರೂ ಬಂದಿಲ್ಲ. ಸಣ್ಣ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆಕೆಯ ಕುಟುಂಬದ ಆರ್ಥಿಕ ಸ್ಥಿತಿ ಕೆಟ್ಟದಾಗಿದೆ. ಎಸ್ಎಸ್ಎಲ್ಸಿ ಓದಿರುವ ಸಂತ್ರಸ್ತೆಗೆ ಪುಟ್ಟ ಮಗಳಿದ್ದಾಳೆ. ನಮ್ಮ ಸಹೋದರಿಗೆ ಆದಂತೆ ಯಾರಿಗೂ ಆಗಬಾರದು. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ನಮ್ಮ ಮೇಲೆ ಯಾರೂ ಒತ್ತಡ ಹೇರಿಲ್ಲ ಎಂದರು.
ಪರಿಹಾರಕ್ಕೆ ಮನವಿ ಸಲ್ಲಿಸಿದ ಕುಟುಂಬಸ್ಥರು
ಸಾಮೂಹಿಕ ಅತ್ಯಾಚಾರದ ಸಂತ್ರಸ್ಥೆಯ ಕುಟುಂಬಸ್ಥರು ನರಸೀಪುರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸೂಕ್ತ ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡುವಂತೆ ಮನವಿ ಸಲ್ಲಿಸಿದರು. ಅವರಿಗೆ ದೈರ್ಯ ಹಾಗೂ ಸಾಂತ್ವನ ಹೇಳಿದ ಸಿಎಂ, ಮನವಿ ಸ್ವೀಕರಿಸಿ ಪರಿಹಾರ ನೀಡುವುದಾಗಿ, ಸೂಕ್ತ ತನಿಖೆ ಮಾಡುವುದಾಗಿ ಭರವಸೆ ನೀಡಿದರು.