ಹಾವೇರಿ: ಯುವಕನೊಬ್ಬ ಅಪ್ರಾಪ್ತ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಫೋಟೋ ಹಾಗೂ ವಿಡಿಯೋ ದುರುಪಯೋಗಪಡಿಸಿಕೊಂಡು ಅಶ್ಲೀಲವಾಗಿ ಬಿತ್ತರಿಸಿದ್ದಾನೆಂದು ಆರೋಪಿಸಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ನಗರದ ಎಂಜಿ ರಸ್ತೆಯ ಎಸ್ಪಿ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದ ಎಬಿವಿಪಿ ಕಾರ್ಯಕರ್ತರು, ಇನ್ಸ್ಟಾಗ್ರಾಮ್ನಲ್ಲಿ ಖಾತೆ ತೆರೆದು ಅಶ್ಲೀಲವಾಗಿ ಬಿತ್ತರಿಸುತ್ತಿದ್ದಾನೆ. ಈ ಮೂಲಕ ಅವರ ತೇಜೋವಧೆ ಮಾಡುತ್ತಿದ್ದಾನೆ. ಈ ಕುರಿತು ವಿದ್ಯಾರ್ಥಿನಿಯೊಬ್ಬರ ಪಾಲಕರು ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಆರೋಪಿತನನ್ನು ಬಂಧಿಸಲಾಗಿಲ್ಲ.
ಈ ಹಿಂದೆ ಕಾಲೇಜಿನಲ್ಲಿ ಇಂತಹ ಕೃತ್ಯಕ್ಕೆ ಕ್ಷಮಾಪಣೆ ಕೇಳಿದ್ದ. ಇದೀಗ ಮತ್ತೆ ಅಂತಹ ಕೃತ್ಯಕ್ಕೆ ಮುಂದಾಗಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತರನ್ನು ಬಂಧಿಸಬೇಕು. ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಅಭಿಷೇಕ ದೊಡ್ಡಮನಿ, ನಾಗರಾಜ ಪುರವಂತಿಗೌಡ್ರ, ನವೀನ ಜಿ.ಕೆ., ನಾಗರಾಜಎಂ., ಸುಜೀತ ಪಿ.ಕೆ., ಇತರರು ಉಪಸ್ಥತರಿದ್ದರು.