ಹಾವೇರಿ: ಪೊಲೀಸ್ ಠಾಣೆಯ ಬಾಗಿಲಿಗೆ ಬರುವ ಸಂತ್ರಸ್ತರನ್ನು ದೇವರಂತೆ ಗೌರವಿಸಬೇಕು. ನೊಂದು ಬೆಂದು ಬಂದಿರುವ ಬಡವರಿಗೆ ಸೇವೆ ಮಾಡುವುದರಿಂದ ವೃತ್ತಿಯಲ್ಲಿ ತೃಪ್ತಿ ಸಿಗುತ್ತದೆ ಎಂದು ನಿವೃತ್ತ ಎಡಿಜಿಪಿ ಕೆ.ವಿ.ಗಗನದೀಪ ಪೊಲೀಸರಿಗೆ ಸಲಹೆ ನೀಡಿದರು.
ನಗರದ ಶ್ರೀ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ 1999ನೇ ಸಾಲಿನಲ್ಲಿ ಆಯ್ಕೆಯಾದ ಸಶಸ್ತ್ರ ಮೀಸಲು ಪಡೆಯ (ಡಿಆರ್) ಪೊಲೀಸ್ ಸಿಬ್ಬಂದಿಯಿಂದ ಸೋಮವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
25 ವರ್ಷಗಳ ಹಿಂದೆ ಹಲವು ಸಿಬ್ಬಂದಿಗೆ ಸಂತೃಪ್ತ ಮತ್ತು ಸಾರ್ಥಕ ಜೀವನಕ್ಕೆ ನೆಲೆ ಕೊಟ್ಟ ಬಗ್ಗೆ ನಮಗೂ ಹೆಮ್ಮೆ ಇದೆ. ಆರೋಗ್ಯವಿದ್ದರೆ ಮಾತ್ರ ಅದೃಷ್ಟ ಬರುತ್ತದೆ. ಪ್ರತಿ ಪೊಲೀಸರು ಸೂರು ಮಾಡಿಕೊಂಡು, ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ, ಡಿವೈಎಸ್ಪಿ ನಿಸ್ಸೀಮಪ್ಪ ಹನಕನಹಳ್ಳಿ, ಆರಕ್ಷಕ ನಿರೀಕ್ಷಕರಾದ ಶಂಕರಗೌಡ ಪಾಟೀಲ, ಎಂ.ಸಿ.ಕುನ್ನೂರ, ಕೆ.ಎಫ್.ಮೆಣಸಿನಹಾಳ, ಈರಣ್ಣ ಹುಲಿಹಳ್ಳಿ, ಬಿ.ಬಿ.ಲಮಾಣಿ, ಎಸ್.ಎಚ್.ಕಡೇಮನಿ, ಎ.ಡಿ.ಹಿರೇಮಠ, ಜಗದೀಶ ಕೋರಿ, ಹನುಮಂತಸಿಂಗ್ ರಜಪೂತ, ಷಹಜಹಾನ್ ಕಡೇಮನಿ, ಎಚ್.ಎಚ್.ಕೊರವರ, ಇತರರು ಪಾಲ್ಗೊಂಡಿದ್ದರು.
ಕಲಾವಿದ ಕರಿಯಪ್ಪ ಹಂಚಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಪಿ.ಹಿರೇಮಠ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಸಿ.ವಿ.ಮಾಳಾಪುರ ವಂದಿಸಿದರು.
ಜಿಲ್ಲೆಯ ಮೊದಲ ಎಸ್ಪಿ
ಹಾವೇರಿ ಜಿಲ್ಲೆಯ ಮೊದಲನೇ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಗಗನದೀಪ ಅವರು 1999ರಲ್ಲಿ 300ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ಯುವಕರಿಗೆ ಇಲಾಖೆಯಲ್ಲಿ ನೌಕರಿ ಲಭ್ಯವಾಗುವಂತೆ ಶ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಕೃತಜ್ಞತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.