ಹಾವೇರಿ/ ಶಿಗ್ಗಾಂವಿ: ಸಿಎಂ ವಿರುದ್ಧ ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಯುಸೂಫ್ ಸವಣೂರ ಅವರನ್ನು ದಿಢೀರ್ ಬದಲಾವಣೆ ಮಾಡಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ.
ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಯುಸೂಫ್ ಸವಣೂರ ಅವರನ್ನು ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಎಂದು ಮಂಗಳವಾರ ಕಾಂಗ್ರೆಸ್ ಘೋಷಿಸಿತ್ತು. ಇದೀಗ ಯಾಸೀರ್ ಖಾನ್ ಪಠಾಣ ಅವರನ್ನು ಶಿಗ್ಗಾಂವಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಹೈಕಮಾಂಡ್ ಅಚ್ಚರಿ ಮೂಡಿಸಿದೆ.
ಹಾನಗಲ್ಲ ತಾಲೂಕು ಬೊಮ್ಮನಹಳ್ಳಿ ಮೂಲದ ಕಾಂಗ್ರೆಸ್ ಮುಖಂಡ ಪಠಾಣ, ರಿಯಲ್ ಎಸ್ಟೇಟ್ ಉದ್ಯಮಿ, ಬಿಲ್ಡರ್ ಹಾಗೂ ಹೋಟೆಲ್ ಉದ್ಯಮಿಯಾಗಿದ್ದಾರೆ. ಪಠಾಣ ಹೆಸರು ಮೊದಲು ರೇಸ್ ನಲ್ಲಿತ್ತಾದರೂ ಕೊನೆಯಲ್ಲಿ ಕೈಬಿಡಲಾಗಿತ್ತು. ಇದೀಗ ನಾಮಪತ್ರ ಸಲ್ಲಿಸಲು ಒಂದೇ ದಿನ ಬಾಕಿ ಇರುವಾಗ ದಿಢೀರ್ ಬದಲಾವಣೆ ಮಾಡಿ, ಪಠಾಣ ಹೆಸರು ಅಂತಿಮಗೊಳಿಸಿದೆ. ಇದರಿಂದ ಸ್ಥಳೀಯ ಕಾರ್ಯಕರ್ತರಲ್ಲಿ ಗೊಂದಲ ಮೂಡಿದ್ದು, ಬಂಡಾಯ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎನ್ನುತ್ತವೆ ಮೂಲಗಳು.