ಹಾವೇರಿ: ಕಳೆದ ವರ್ಷ ಆರಂಭವಾಗಿರುವ ರಾಜ್ಯದ ಏಳು ವಿಶ್ವವಿದ್ಯಾಲಯಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಬಾರಿಯ ವಿಧಾನ ಪರಿಷತ್ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ತಿಳಿಸಿದ್ದಾರೆ.
ವಿಶ್ವವಿದ್ಯಾಲಯಗಳ ಕುಲಪತಿಗಳು ಸೇರಿದಂತೆ ಇತರ ಸಿಬ್ಬಂದಿಗೆ ಹತ್ತು ತಿಂಗಳಿನಿಂದ ಸಂಬಳವಾಗಿಲ್ಲ. ಅನುದಾನ ಇಲ್ಲದ ಕಾರಣ ಕಂಪ್ಯೂಟರ್, ಪ್ರಿಂಟರ್ನಂಥ ಕನಿಷ್ಠ ಸೌಲಭ್ಯಗಳಿಗೂ ವಿವಿಗಳು ಪರದಾಡುವಂತಾಗಿದೆ. ಇದರಿಂದ ಅಲ್ಲಿನ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪೆಟ್ಟು ಬೀಳುತ್ತಿದೆ. ಈ ವಿಷಯದ ಕುರಿತು ಸದನದಲ್ಲಿ ಚರ್ಚಿಸಿ, ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಎಬಿವಿಪಿಯಿಂದ ಹೋರಾಟಕ್ಕೆ ಸಿದ್ಧತೆ
ಹಣ ಇಲ್ಲ ಎನ್ನುವ ಕಾರಣ ಹೊಸ ಏಳು ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡದೇ ವಿದ್ಯಾರ್ಥಿ ವಿರೋಧಿ ಧೋರಣೆ ತೋರುತ್ತಿರುವ ಸರ್ಕಾರದ ನೀತಿಯನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ವಾರದೊಳಗೆ ಏಳು ವಿವಿಗಳಿಗೆ ಅಗತ್ಯ ಅನುದಾನ, ಸಿಬ್ಬಂದಿ ಸಂಬಳ ಬಿಡುಗಡೆ ಮಾಡದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಆರಂಭಿಸಲಾಗುವುದು ಎಂದು ಎಬಿವಿಪಿ ಉತ್ತರ ಪ್ರಾಂತ ಕಾರ್ಯದರ್ಶಿ ಸಚಿನ ಕುಳಗೇರಿ ಪ್ರಕಟಣೆ ಮೂಲಕ ಎಚ್ಚಿರಿಸಿದ್ದಾರೆ.