ಹಟ್ಟಿಚಿನ್ನದಗಣಿ: ಇಲ್ಲಿನ ಪಪಂ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಅಧ್ಯಕ್ಷೆ ವಿಜ್ಜಮ್ಮ ನಾಗರೆಡ್ಡಿ ಜೇರಬಂಡಿ ವಿರುದ್ಧ ಸದಸ್ಯರು ಚಲಾಯಿಸಿದ ಅವಿಶ್ವಾಸ ಗೊತ್ತುವಳಿ ನಿರ್ಣಯ ಅಂಗೀಕಾರಗೊಂಡಿತು.
ಬೆಳಗ್ಗೆ 11ಕ್ಕೆ ಪಪಂ ಕಚೇರಿಯಲ್ಲಿ ಉಪಾಧ್ಯಕ್ಷೆ ನಾಗರತ್ನ ಶರಣಗೌಡಗುರೀಕಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಾಧಿಕಾರಿ ಅಭಿಷೇಕ್ ಪಾಂಡೆ ನಿರ್ಣಯ ಕುರಿತು ಅಧಿಕೃತವಾಗಿ ಘೋಷಿಸಿದರು. ಕಾಂಗ್ರೆಸಿನ 8, ಜೆಡಿಎಸ್ನ 3 ಹಾಗೂ ಇಬ್ಬರು ಪಕ್ಷೇತರರು, ಸಂಸದ ರಾಜಾಅಮರೇಶ್ವರ ನಾಯಕ್, ಶಾಸಕ ಡಿ.ಎಸ್ ಹೂಲಗೇರಿ ಮತ ಸೇರಿ ಒಟ್ಟು 15 ಮತಗಳ ಪೈಕಿ, 9 ಜನ ಸದಸ್ಯರು ಹಾಜರಿದ್ದರು. ಸಿರಾಜುದ್ದೀನ್, ಬಾಬು ನಾಯಿಕೋಡಿ, ಜಿ.ಶ್ರೀನಿವಾಸ್, ರೇಣುಕಾ ಗುಂಡಪ್ಪ, ರಂಗನಾಥ ಮುಂಡರಗಿ, ಪಾರ್ವತಿ ನಿಂಗಪ್ಪ ಮನಗೂಳಿ ಕಾಂಗ್ರೆಸಿನ 6 ಹಾಗೂ ಉಪಾಧ್ಯಕ್ಷೆ ನಾಗರತ್ನ ಶರಣಗೌಡಗುರೀಕಾರ್, ದುರಗಮ್ಮ ದುರಗಪ್ಪ, ವಿದ್ಯಾಶ್ರೀ ಶ್ರೀನಿವಾಸ್ ಜೆಡಿಎಸ್ನ ಮೂರು ಸದಸ್ಯರು ಕೈ ಎತ್ತುವ ಮುಖಾಂತರ ಅವಿಶ್ವಾಸದ ಪರ ಮತಚಲಾಯಿಸಿದರು. ವಿಜ್ಜಮ್ಮ ನಾಗರೆಡ್ಡಿ ಜೇರಬಂಡಿ, ಬೇಗಂ ಶಮೀಮ್ಸಾಬ್ ಕಾಂಗೇಸಿನ ಇಬ್ಬರು, ಪಕ್ಷೇತರ ಸದಸ್ಯರಾದ ಸಮದಾನಿ, ಸೈಯದ್ ಇಸ್ಮಾಯೀಲ್ ಖಾದ್ರಿ 4 ಸದಸ್ಯರ ಗೈರು ಹಾಜರಿ ಹಾಗೂ ಶಾಸಕ-ಸಂಸದರ ಅನುಪಸ್ಥಿತಿಯಲ್ಲಿ, ಯಾರೊಬ್ಬರು ಅವಿಶ್ವಾಸದ ವಿರುದ್ಧ ಮತಚಲಾಯಿಸುದ್ದರಿಂದ ಅವಿಶ್ವಾಸ ಗೊತ್ತುವಳಿ ನಿರ್ಣಯ ಅಂಗಿಕಾರಗೊಂಡಿತು.
ಕಳೆದ 15 ದಿನಗಳಿಂದ 9 ಸದಸ್ಯರು ಟೂರ್ಗೆ ಹೋಗಿದ್ದು, ಮಂಗಳವಾರ ನಡೆದ ಸಾಮಾನ್ಯ ಸಭೆ ಮುಗಿಸಿಕೊಂಡು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಪಾರ್ವತಿ ನಿಂಗಪ್ಪ ಮನಗೂಳಿಯರ ಕುಟುಂಬ ಹಾಗೂ ಕಾಂಗ್ರೆಸಿನ ಒಂದು ಗುಂಪಿನ ಬಿಗಿ ಭದ್ರತೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಯುವವರೆಗೆ ರೆಸಾರ್ಟ್ಗೆ ಸದಸ್ಯರು ತೆರಳಿರುವ ಘಟನೆ ನಡೆಯಿತು.