ಹಟ್ಟಿಚಿನ್ನದಗಣಿ: ಪಟ್ಟಣ ಹಾಗೂ ಗುರುಗುಂಟಾ, ಆನ್ವರಿ, ಗೆಜ್ಜಲಗಟ್ಟಾ, ಕೋಠಾ, ರೋಡಲಬಂಡಾ(ತವಗ), ಪೈದೊಡ್ಡಿ ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ರೈತರು ಸಂಭ್ರಮದಿಂದ ಎಳ್ಳ ಅಮಾವಾಸ್ಯೆ ಆಚರಿಸಿದರು.
ಬೆಳಗ್ಗೆಯೇ ಹೊಲಗಳಿಗೆ ತೆರಳಿ ಚರಗ ಚೆಲ್ಲಿದರು. ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಸಮೃದ್ಧ ಮಳೆ ಬೆಳೆಗಾಗಿ ಪ್ರಾರ್ಥಿಸಿದರು. ಬಳಿಕ ಕುಟುಂಬಸ್ಥರು ಹಾಗೂ ನೆಂಟರೆಲ್ಲ ಸೇರಿ ಎಳ್ಳು ಹಚ್ಚಿದ ಸಜ್ಜೆ-ಜೋಳದ ರೊಟ್ಟಿ, ನಾನಾ ಬಗೆಯ ಚಟ್ನಿ, ಕಾಳು, ಎಣ್ಣೆಗಾಯಿ ಪಲ್ಯ, ಎಳ್ಳು-ಶೇಂಗಾ ಹೋಳಿಗೆ ಖಾದ್ಯಗಳನ್ನು ಸವಿದರು. ಸಂಜೆ ವರೆಗೆ ಜಮೀನಿನಲ್ಲೇ ಕಾಲ ಕಳೆದು ಮನೆಗಳಿಗೆ ತೆರಳಿದರು.