ಹಾಸನ: ಕವಿರತ್ನ, ಕವಿಚಕ್ರವರ್ತಿ ಎಂಬ ಬಿರುದು ಗಳಿಸಿದ ರನ್ನ, ಜನ್ನ ಹಾಸನ ಜಿಲ್ಲೆಯಲ್ಲೇ ಸಾಹಿತ್ಯ ಕೃಷಿ ಮಾಡಿದ್ದಾರೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಡಾ. ಎನ್. ರಮೇಶ್ ಹೇಳಿದರು.
ನಗರದ ವಾಸವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ಅಂತರ್ಜಾಲದಲ್ಲಿ ಅಚ್ಚಕನ್ನಡ ಮಾತುಗಾರಿಕೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
12ನೇ ಶತನಮಾದಲ್ಲಿ ವೀರಬಲ್ಲಾಳನ ಆಸ್ಥಾನದಲ್ಲಿದ್ದ ದಂಡಾಧೀಶಂ, ಕುಳ್ಳಿರೆ ಮಂತ್ರಿ, ತೊಡಂಕೆ ಕವಿ ಎಂಬ ಹೆಗ್ಗಳಿಕೆಯ ಜನ್ನನ ಕಾರ್ಯಕ್ಷೇತ್ರ ನಮ್ಮ ಹಾಸನ ಜಿಲ್ಲೆಯೇ. ಜನಾರ್ದನದೇವ ಎಂಬ ಹೆಸರಿನ ಕವಿ ಜನ್ನನಾದ. ಅಲ್ಲದೆ ರನ್ನನ ಹಸ್ತಾಕ್ಷರವನ್ನು ಶ್ರವಣಬೆಳಗೊಳದಲ್ಲಿ ಕಾಣುತ್ತೇವೆ. ಹಲ್ಮಿಡಿಯ ಶಾಸನ ಜಿಲ್ಲೆಗೆ ಹೆಮ್ಮೆಯ ವಿಚಾರ ಎಂದರು.
ಅಂತರ್ಜಾಲದಲ್ಲಿ ಅಚ್ಚಕನ್ನಡ ಮಾತುಗಾರಿಕೆ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಮುಂಬಯಿಯ ನಳಿನಾ ಪ್ರಸಾದ್, ದ್ವಿತೀಯ ಬಹುಮಾನವನ್ನು ಹಾಸನದ ಎಚ್.ಎನ್. ನಾಗೇಂದ್ರ, ಕಿರಿಯರ ವಿಭಾಗದಲ್ಲಿ ವಿಜಯಾ ಶಾಲೆಯ ತನುಶ್ರೀ ಎಮ್. ಗೌಡ, ಎ. ಮಧುರಾ ಕ್ರಮವಾಗಿ ಪ್ರಥಮ, ತೃತೀಯ ಮತ್ತು ವಾಸವಿ ಶಾಲೆಯ ಹೇಮಾಮೃತ ದ್ವಿತೀಯ ಬಹುಮಾನ ಪಡೆದರು.
ಪಾವಗಡದ ಕೃತ್ತಿಕಾ, ತುರುವೇಕೆರೆಯ ಜಮುನಾ ಶ್ರೀನಾಥ್, ಬೆಂಗಳೂರಿನ ಸುಮಾ ಸತೀಶ್, ಕೊರಟಗೆರೆಯ ಸಾದಿಕ್ ಬಾಷಾ ನಾಲ್ಕನೇ ಬಹುಮಾನ ಪಡೆದಿದ್ದಾರೆ. ಶಾಲೆಯ ಆಡಳಿತ ನಿರ್ವಾಹಕ ಜಿ.ಎಸ್. ಮಂಜುನಾಥ್, ಮುಖ್ಯ ಶಿಕ್ಷಕಿ ಶೀಲಾ ಹಾಗೂ ಇತರರಿದ್ದರು.