ಹಾಸನ: ಸಾರ್ವಜನಿಕರ ಅಭಿಪ್ರಾಯ ಪಡೆದು ಚನ್ನಪಟ್ಟಣ ಕೆರೆಯಲ್ಲಿ ಡಿಸ್ನಿ ಲ್ಯಾಂಡ್ ಬೇಡವೆಂದು ತೀರ್ಮಾನಿಸಿದ್ದೇನೆ. ಅವರು ಅಧಿಕಾರಕ್ಕೆ ಬಂದರೆ ಕೆರೆ ಸುತ್ತ ಚಿನ್ನದ ಲೇಪನ ಹಾಕಿಕೊಳ್ಳಲಿ ಎಂದು ಶಾಸಕ ಪ್ರೀತಂ ಜೆ. ಗೌಡ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ತಿರುಗೇಟು ನೀಡಿದರು.
ಜನರಿಗೆ ಬೇಕಿರುವುದು ಕುಡಿಯುವ ನೀರು ಹೊರತು ಮಕ್ಕಳು ಆಟವಾಡುವ ರೈಲು, ಕಾರಂಜಿಯಲ್ಲ. ಚನ್ನಪಟ್ಟಣ ಕೆರೆಯನ್ನು ಡಿಸ್ನಿ ಲ್ಯಾಂಡ್ ಮಾದರಿ ಅಭಿವೃದ್ಧಿ ಪಡಿಸುವುದು ಹೊಟ್ಟೆಗೆ ಹಿಟ್ಟಿಲ್ಲದೆ ಜುಟ್ಟಿಗೆ ಮಲ್ಲಿಗೆ ಹೂವು ಮುಡಿಸಿದಂತೆ ಆಗುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ರೂಪಗೊಂಡಿದ್ದ ಆ ಯೋಜನೆ ತಿಪ್ಪೆ ಗುಂಡಿ ಸೇರಿತ್ತು.
ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರಿಗೆ ಹೇಳಿ 144 ಕೋಟಿ ರೂ. ವೆಚ್ಚದಲ್ಲಿ ನಗರದ ಆರು ಕೆರೆ ಹಾಗೂ ಒಂಬತ್ತು ಪಾರ್ಕ್ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಭಾನುವಾರ ಸ್ಪಷ್ಟಪಡಿಸಿದರು.
ನನಗೆ ಕ್ಷೇತ್ರದ ಜನ ಮತ ನೀಡಿ ಗೆಲ್ಲಿಸಿದ್ದಾರೆ. ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿದೆ. ಹೇಮಾವತಿ ನದಿ ನೀರು ಸರಬರಾಜು ನಿಂತರೆ ಕೊಳವೆ ಬಾವಿಗಳನ್ನೇ ಅವಲಂಬಿಸಬೇಕು. ಹಾಗಾಗಿ ನಗರ ಸುತ್ತಮುತ್ತಲಿನ ಕೆರೆಗಳ ಪುನಶ್ಚೇತನ ಅಗತ್ಯವಾಗಿತ್ತು. ನಾಗರಿಕರ ಜತೆಗೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು.
ನಾನು ಸರ್ವಾಧಿಕಾರಿಯಲ್ಲ, ಜನರಿಂದ ಆಯ್ಕೆಯಾಗಿದ್ದು, ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದೇನೆ. ಮಾತೆತ್ತಿದರೆ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಾರೆ. ಪ್ರಧಾನಿ, ಇಬ್ಬರು ಮುಖ್ಯಮಂತ್ರಿ ಹಾಗೂ ಮೂರು ಬಾರಿ ಸಚಿವರಾಗಿದ್ದ ಇವರಿಗೆ ನಗರದಲ್ಲಿ ಒಳಚರಂಡಿ ಸಂಸ್ಕರಣಾ ಘಟಕ ಮಾಡಬೇಕೆಂಬ ಜ್ಞಾನ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.