More

    ನಮ್ಮಪ್ಪಂದು ಅಲ್ಲ, ನಿಮ್ಮಪ್ಪಂದು ಅಲ್ಲ!


    ಹಾಸನ: ಇಷ್ಟು ದಿನ ಅವರ ಆರ್ಭಟ ಇತ್ತು, ಈಗ ನಿಂದು ಶುರುವಾಗಿದೆ. ಒಂದು ವರ್ಷದಲ್ಲೇ ಎಲ್ಲಿ ಏನು ಮಾಡ್ಬೇಕೋ ಅದನ್ನೆಲ್ಲ ಮಾಡ್ಕೊಂಡಿದಿಯಾ, ಅವರು ಈಗ ತಣ್ಣಗಾಗಿದ್ದಾರೆ ನಿಂದೇ ಜೋರಾಗಿದೆ..!

    ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಸನದ ಪ್ರೀತಂ ಜೆ. ಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ ಇದು. ಇದಕ್ಕೆ ಪ್ರೀತಂ ಜೆ. ಗೌಡ ಸಹ ಪ್ರತ್ಯುತ್ತರ ನೀಡುವ ಮೂಲಕ ಟಾಂಗ್ ನೀಡಿದರು.

    ಅತಿವೃಷ್ಟಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರ 19 ಕೋಟಿ ರೂ. ನೀಡಿತ್ತು. ಆದರೆ ರೇವಣ್ಣನವರು 9 ಕೋಟಿ ರೂ. ಬಾರದ ಹಾಗೆ ಮಾಡಿದ್ದಾರೆ. ಯಾಕಣ್ಣ ಹೀಗೆಲ್ಲ ಮಾಡಿದ್ರಿ, ಆ ದುಡ್ಡು ಬಂದಿದ್ದರೆ ಶಾಂತಿಗ್ರಾಮ, ದುದ್ದ ಹೋಬಳಿಗೆ ಅನುಕೂಲವಾಗುತ್ತಿತ್ತು ಅಲ್ಲವಾ ಎಂದರು.

    ಆಗ ಮಾತನಾಡಿದ ಮಾಜಿ ಸಚಿವ ಎಚ್.ಡಿ. ರೇವಣ್ಣ, ಇಲ್ಲ ಕಣಯ್ಯ, ನಾನ್ಯಾಕ್ ದುಡ್ಡು ಬಾರದ ಹಾಗೆ ಮಾಡಲಿ ನಂದೇನು ಇಲ್ಲ ಇದರಲ್ಲಿ ಎಂದು ಹೇಳಿ ಸಭೆಯಿಂದ ನಿರ್ಗಮಿಸಿದರು.

    ಆಗ ಮಾತು ಪ್ರಾರಂಭಿಸಿದ ಕೆ.ಎಂ. ಶಿವಲಿಂಗೇಗೌಡ, ನೀವೆಲ್ಲ ಏನಂತ ತಿಳ್ಕೊಂಡಿದಿರಿ. ನೀವಿಬ್ಬರೇ ಶಾಸಕರಾ ? ನಾವೇನು ದನ ಕಾಯೋಕ್ ಬಂದಿದ್ದೀವಾ ? 19 ಕೋಟಿ ಒಂದೇ ತಾಲೂಕಿಗೆ ಕೊಡೊದು ಅಂದ್ರೆ ಏನರ್ಥ. ಅನುದಾನ ಯಾರಪ್ಪನ ಮನೆಯಿಂದ ತರುವುದಿಲ್ಲ. ಸರ್ಕಾರದ ದುಡ್ಡು ನಮಗೂ ಕೊಡ್ರಿ ಎಂದು ವಾಗ್ದಾಳಿ ನಡೆಸಿದರು.

    ಆಗ ಪ್ರತಿಕ್ರಿಯಿಸಿದ ಪ್ರೀತಂ ಗೌಡ, ನಿಮ್ಮ ಸರ್ಕಾರ ಇದ್ದಾಗ ನೀವು ತಂದಿದ್ದು ಅಂತೀರಿ. ನಮ್ಮ ಸರ್ಕಾರ ಇದ್ದಾಗ ನಾನೇ ತಂದಿದ್ದೇನೆ ಅಂತೀನಿ. ದುಡ್ಡು ನಮ್ಮ ಅಪ್ಪಂದು ಅಲ್ಲ ನಿಮ್ಮ ಅಪ್ಪಂದು ಅಲ್ಲ !

    ಇದು ಯಡಿಯೂರಪ್ಪ ಸರ್ಕಾರ. ಅವರ ಹೆಸರು ಹೇಳಲು ನಾನ್ಯಾಕೆ ಹಿಂಜರಿಯಲಿ. ನನಗೂ ಟೇಬಲ್ ಕುಟ್ಟಿ ಮಾತನಾಡಲು ಬರುತ್ತೆ ಎಂದು ಶಾಸಕ ಪ್ರೀತಂ ಗೌಡ ಆಕ್ರೋಶ ವ್ಯಕ್ತಪಡಿಸಿದರು. ಯಾವ ತಾಲೂಕಿಗೆ ಅನುದಾನ ಬಂದ್ರೂ ರೇವಣ್ಣೋರು ತಗೊಂಡ್ ಹೋಗ್ತಿದ್ದರು. ಅದನ್ನ ಅವರು ಇಲ್ಲಿದ್ದಾಗ ಹೇಳಲಿಲ್ಲ, ಈಗ ಹೇಳ್ತಿದಿರಿ ಎಂದು ವ್ಯಂಗ್ಯವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts