ಹಾಸನ: ಅಧಿಕ ಆದಾಯದ ಆಸೆಗೆ ಬಿದ್ದ ಜಮೀನು ಮಾಲೀಕ ಅಪರಿಚಿತನ ಮಾತು ನಂಬಿ 1.21 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಆಲೂರು ತಾಲೂಕು ಕೆ. ಹೊಸಕೋಟೆ ಗ್ರಾಮದ ಎಸ್.ಎಂ. ವೆಂಕಟೇಶ್ ಎಂಬುವರು ಮೋಸಕ್ಕೊಳಗಾಗಿದ್ದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಜುಲೈ 2 ರಂದು ಕರೆ ಮಾಡಿದ್ದ ಅನಾಮಿಕ ವ್ಯಕ್ತಿ, ಜಮೀನಿನಲ್ಲಿ ರಿಲಯನ್ಸ್ ಜಿಯೋ ಟವರ್ ಅಳವಡಿಸುತ್ತಿದ್ದು ಸಮ್ಮತಿ ಸೂಚಿಸಿದರೆ ಮುಂಗಡವಾಗಿ 60 ಲಕ್ಷ ಹಾಗೂ ಪ್ರತಿ ತಿಂಗಳು 50 ಸಾವಿರ ರೂ. ಬಾಡಿಗೆ ಕೊಡಿಸುವುದಾಗಿ ತಿಳಿಸಿದ್ದನು. ಇದನ್ನು ನಂಬಿದ ವೆಂಕಟೇಶ್ ಪಹಣಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನು ವಾಟ್ಸ್ ಆ್ಯಪ್ ಮೂಲಕ ಕಳುಹಿಸಿದ್ದಾರೆ. ಜತೆಗೆ ಆತ ಹೇಳಿದ ಬ್ಯಾಂಕ್ ಖಾತೆಗೆ 1.21 ಲಲಕ್ಷ ರೂ. ಜಮೆ ಮಾಡಿದ್ದಾರೆ. ಈಗ ಅಪರಿಚಿತ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಹಾಸನ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ.