ಹಾಸನ: 2023ರ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಕುರಿತು ಮನವರಿಕೆ ಮಾಡಿದ್ದೇನೆ ಎಂದು ಬಾಗೂರು ಮಂಜೇಗೌಡ ಹೇಳಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಒಂಬತ್ತು ವರ್ಷ ಆರ್ಟಿಒ ಅಧಿಕಾರಿಯಾಗಿದ್ದ ನಾನು ಕ್ಷೇತ್ರದ ಜನರ ನಾಡಿಮಿಡಿತ ಅರಿತಿದ್ದೇನೆ. ಇಲ್ಲಿನ ಮೂಲ ಸಮಸ್ಯೆಗಳೇನು ಎಂಬುದರ ಸಂಪೂರ್ಣ ಅರಿವಿದೆ. 2018ರಲ್ಲಿಯೂ ಈ ಕ್ಷೇತ್ರದಿಂದಲೇ ಟಿಕೆಟ್ ಕೇಳಿದ್ದೆ.
ಹೈಕಮಾಂಡ್ ಹೊಳೆನರಸೀಪುರದಿಂದ ಸ್ಪರ್ಧಿಸಲು ಸೂಚಿಸಿತ್ತು. ಆದರೆ ಈ ಬಾರಿ ಹಾಸನವೇ ನನ್ನ ಆದ್ಯತೆಯಾಗಿದ್ದು ಈಗಿನಿಂದಲೇ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ನಗರದಲ್ಲೇ ಮನೆ ಹಾಗೂ ಕಚೇರಿ ಮಾಡಿಕೊಂಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೂ ಮನದಾಸೆ ಹೇಳಿದ್ದೇನೆ ಎಂದರು.