ಚನ್ನರಾಯಪಟ್ಟಣ: ತಾಲೂಕಿನ ಪಿ.ಹೊಸಹಳ್ಳಿ ಗ್ರಾಮದಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿಯ ಮಾಲಾಧಾರಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮದ ಅಂಗವಾಗಿ ಗ್ರಾಮದೇವತೆಗಳ ಉತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.
ಗ್ರಾಮದಲ್ಲಿ 35ಕ್ಕೂ ಹೆಚ್ಚು ಭಕ್ತರು ಶಬರಿಮಲೆ ಅಯ್ಯಪ್ಪಸ್ವಾಮಿಯ ಮಾಲೆ ಧರಿಸಿದ್ದು, 21 ದಿನಗಳಿಂದ ಗ್ರಾಮದ ಶ್ರೀರಾಮ ಮಂದಿರದಲ್ಲಿ ಅಯ್ಯಪ್ಪಸ್ವಾಮಿ ವಿಗ್ರಹ ಕೂರಿಸಿ ನಿತ್ಯ ಪೂಜೆ ಹಾಗೂ ಭಜನಾ ಕಾರ್ಯಕ್ರಮ ನಡೆಸಿದರು. ಶಬರಿಮಲೆಗೆ ಹೊರಟಿರುವ ಹಿನ್ನೆಲೆಯಲ್ಲಿ ಗ್ರಾಮ ದೇವತೆ ಶ್ರೀ ಪರಶುರಾಮ, ಆಂಜನೇಯಸ್ವಾಮಿ, ನಾಗರದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಂಜೆ ಮೂರು ವಾಹನಗಳಲ್ಲಿ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಮೂರು ದೇವರ ಮೂರ್ತಿಯನ್ನು ಕೂರಿಸಿ ಉತ್ಸವ ನಡೆಸಲಾಯಿತು. ಬಳಿಕ ಮಂಗಳಾರತಿ ನೆರವೇರಿಸಿ ಇರುಮುಡಿ ಕಟ್ಟಲಾಯಿತು.