ಹಾಸನ: ಸಪ್ತಮಾತೃಕೆಯರಲ್ಲಿ ಒಬ್ಬಳಾದ ಹಾಗೂ ವರ್ಷಕ್ಕೊಮ್ಮೆ ಮಾತ್ರವೇ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.
ಹಾಸನಾಂಬೆ ಜಾತ್ರೆ ಪ್ರಯುಕ್ತ ಸೋಮವಾರ ದೇವಿಯ ಆಭರಣಗಳನ್ನು ದೇವಾಲಯಕ್ಕೆ ತರಲಾಯಿತು. ಖಜಾನೆಯಲ್ಲಿ ರಿಸಿದ್ದ ಆಭರಣಗಳನ್ನು ಹೊರತಂದು, ಅಡ್ಡ ಪಲ್ಲಕ್ಕಿ ಮೇಲಿರಿಸಿ ಸಂಪ್ರದಾಯದಂತೆ ಮಡಿವಾಳರು ಪಂಜು ಹಾಗೂ ಮುತ್ತೈದೆಯರು ಆರತಿ ಬೆಳಗಿದರು. ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಿದ್ದ ಅಡ್ಡಪಲ್ಲಕ್ಕಿ ಮೇಲೆ ಆಭರಣ ಇರಿಸುತ್ತಿದ್ದಂತೆ ಭಕ್ತರು ಹಾಸನಾಂಬೆಗೆ ಜೈಕಾರ ಕೂಗಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅಡ್ಡಪಲ್ಲಕಿಗೆ ಪೂಜೆ ಸಲ್ಲಿಸಿ ಆಭರಣಗಳನ್ನು ಖಜಾನೆಯಿಂದ ಕಳುಹಿಸಿಕೊಟ್ಟರು. ಮಂಗಳವಾದ್ಯ ಸಮೇತ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಹಾಸನಾಂಬೆ ದೇವಾಲಯಕ್ಕೆ ಆಭರಣ ತರಲಾಯಿತು. ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ತಹಸೀಲ್ದಾರ್ ಶಿವಶಂಕರಪ್ಪ ಇತರರಿದ್ದರು.
ನ.5ರಂದು ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿಲ್ಲ. ನಗರದ ಅಲ್ಲಲ್ಲಿ ಎಲ್ಇಡಿ ಪರದೆ ಮೇಲೆ ದೇವಿಯ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ.