ಹರಿಯಾಣ: ಪಂಜಾಬ್ನಲ್ಲಿ ಖಾಲಿಸ್ತಾನಿ ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿರುವ ಆರೋಪದ ಮೇಲೆ ವಾರಿಸ್ ಪಂಜಾಬ್ ದೇ ಸಂಘಟನೆಯ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮಹತ್ವದ ಬೆಳವಣಿಗೆಯಲ್ಲಿ ಆರೋಪಿಯು ಹರಿಯಾಣದ ಕುರುಕ್ಷೇತ್ರದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಲು ಮುಂದಾದಾಗ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಅಮೃತ್ಪಾಲ್ಗೆ ಆಶ್ರಯ ನೀಡಿದ ಆರೋಪದ ಮೇಲೆ ಕುರುಕ್ಷೇತ್ರದ ಶಹಬಾದ್ನಲ್ಲಿ ಮಹಿಳೆ ಹಾಗೂ ಲುಧಿಯಾನದಲ್ಲಿ ಓರ್ವ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಲ್ಜಿತ್ ಕೌರ್, ತೇಜೇಂದರ್ ಸಿಂಗ್ ಗಿಲ್ ಎಂದು ಗುರುತಿಸಲಾಗಿದೆ.
ಬಂಧಿತ ಮಹಿಳೆಯನ್ನ ಪಂಜಾಬ್ ಪೊಲೀಸರ ಸುಪರ್ದಿಗೆ ಒಪ್ಪಿಸಲಾಗಿದ್ದು ಆರೋಪಿಯೂ ಅಮೃತ್ಪಾಲ್ ಸಿಂಗ್ಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಳು ಎಂದು ಕುರುಕ್ಷೇತ್ರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರಿಂದರ್ ಸಿಂಗ್ ಬೋರಿಯಾ ತಿಳಿಸಿದ್ದಾರೆ.
ಅಮೃತ್ಪಾಲ್ಗೆ ಭದ್ರತೆ ಒದಗಿಸುತ್ತಿದ್ದ ಆರೋಪದ ಮೇಲೆ ಲುಧಿಯಾನ ಮೂಲದ ತೇಜೇಂದರ್ ಸಿಂಗ್ ಗಿಲ್ನನ್ನ ಬಂಧಿಸಿರುವುದಾಗಿ ಪಂಜಾಬ್ ಪೊಲೀಸರು ಮಾಹಿತಿ ನೀಡಿದ್ದಾರೆ.