ಶಿವಮೊಗ್ಗ: ನಗರದಲ್ಲಿ ಶನಿವಾರ ನಡೆದ ಸಾವರ್ಕರ್ ಸಾಮ್ರಾಜ್ಯದ ಮೆರವಣಿಗೆ ವೇಳೆ ಕಾರು ಜಖಂಗೊಳಿಸಿದ ಆರೋಪದ ಮೇಲೆ ಬಜರಂಗ ದಳದ ಕಾರ್ಯಕರ್ತ ದಿ. ಹರ್ಷನ ಸಹೋದರಿ ಅಶ್ವಿನಿ ಸೇರಿದಂತೆ 15 ಮಂದಿ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆಜಾದ್ನಗರದ ಸೈಯದ್ ಎಂಬುವರ ಕಾರು ಜಖಂ ಆಗಿದ್ದು ದುರುದ್ದೇಶ ಪೂರ್ವಕವಾಗಿ ಗುಂಪು ಸೇರಿ ಗಲಭೆ ಸೃಷ್ಟಿಸಲು ಮುಂದಾದ ಆರೋಪ ಹೊರಿಸಿದ್ದಾರೆ. ಶನಿವಾರ ಸಂಜೆ ಸಿಗೇಹಟ್ಟೆಯ ಹರ್ಷನ ಸಹೋದರಿ ಅಶ್ವಿನಿ ಹಾಗೂ ಇತರ 10ರಿಂದ 15 ಜನ ಬೈಕ್ಗಳಲ್ಲಿ ಮೆರವಣಿಗೆ ಹೊರಟಿದ್ದರು.
ಈ ವೇಳೆ ಕಲ್ಲಪ್ಪನ ಕೇರಿ ಕಡೆಯಿಂದ ಗುಂಪಾಗಿ ಬಂದಿದ್ದು ಆಜಾದ್ನಗರದ ಮನೆ ಮುಂದೆ ನಿಲ್ಲಿಸಿದ್ದ ಸೈಯದ್ ಅವರ ಕಾರು ಜಖಂಗೊಂಡಿದೆ. ಕಾರಿನ ಎಡಭಾಗದ ಹೆಡ್ಲೈಟ್, ಸೈಡ್ಡೋರ್, ಹಿಂಬದಿ ಮಡ್ಗಾರ್ಡ್ ಜಖಂಗೊಳಿಸಿದ್ದು, ಸುಮಾರು 10ರಿಂದ 15 ಸಾವಿರ ರೂ. ನಷ್ಟವಾಗಿದೆ ಎಂದು ಸೈಯದ್ ದೂರಿದ್ದಾರೆ.