ಹರಪನಹಳ್ಳಿ: ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಉಳಿಸುವ ಕೆಲಸ ಆಗಬೇಕಿದ್ದು, ಜತೆಗೆ ರಂಗ ಕಲಾವಿದರಿಗೆ ಪ್ರೋತ್ಸಾಹದ ಅಗತ್ಯವೂ ಇದೆ ಎಂದು ತೆಗ್ಗಿನಮಠ ಶ್ರೀ ವರಸದ್ಯೋಜಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಎಸ್ಸಿಎಸ್ ಫಾರ್ಮಸಿ ಕಾಲೇಜಿನ ಆವರಣದಲ್ಲಿ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹಾಗೂ ಎಂ.ಪಿ.ರವೀಂದ್ರ ಅಭಿಮಾನಿಗಳ ಬಳಗದಿಂದ ಶುಕ್ರವಾರ ರಾತ್ರಿ ಆಯೋಜಿಸಿದ್ದ ಕನ್ನಡ ರಾಜೋತ್ಸವ, ದಿ.ಎಂ.ಪಿ.ರವೀಂದ್ರ ಮತ್ತು ಡಾ.ಪುನೀತ್ ರಾಜಕುಮಾರ ಪುಣ್ಯ ಸ್ಮರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚಂದ್ರಶೇಖರ ಕಂಬಾರರ ಕಾದಂಬರಿ ಆಧಾರಿತ ಕರಿಮಾಹೆ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನವೇ ನಾಟಕ ರಂಗ, ನಾವೆಲ್ಲರೂ ಪಾತ್ರಧಾರಿಗಳು. ರಂಗಪ್ರದರ್ಶನದಲ್ಲಿ ಕಲಾವಿದರು ತಮ್ಮ ಜೀವನ ಬದಿಗಿಟ್ಟು ಉತ್ತಮ ಸಂದೇಶ ನೀಡುತ್ತಾರೆ. ಕಲೆ, ಸಾಹಿತ್ಯ, ಶೈಕ್ಷಣಿಕ, ರಾಜಕೀಯವಾಗಿ ತನ್ನದೆಯಾದ ಛಾಪನ್ನು ಹರಪನಹಳ್ಳಿ ಹೊಂದಿದೆ. ನಮ್ಮ ನಾಡಿನ ಹೆಮ್ಮೆಯ ಇತಿಹಾಸ, ರಂಗಭೂಮಿಯ ಮಹತ್ವವನ್ನು ತಮ್ಮ ಮಕ್ಕಳಿಗೆ ತಿಳಿಸಬೇಕು. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಬೇಕು ಎಂದರು.
ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ ಮಾತನಾಡಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ದಿ.ಎಂ.ಪಿ.ಪ್ರಕಾಶ್ರವರನ್ನು ಜೀವಂತವಾಗಿಡಬೇಕು ಎಂದು ಇಂತಹ ಕಾರ್ಯಕ್ರಮಗಳನ್ನು ಟ್ರಸ್ಟ್ ಮುಖಾಂತರ ನಿರಂತರವಾಗಿ ಮಾಡುತ್ತಿದ್ದೇವೆ ಎಂದರು.
ರಂಗಕರ್ಮಿ ಹಾಗೂ ರಾಜ್ಯ ಸಭೆ ಮಾಜಿ ಸದಸ್ಯೆ ಬಿ.ಜಯಶ್ರೀ ಮಾತನಾಡಿ, ಕಲಿತ ಪ್ರಬುದ್ಧ ರಾಜಕಾರಣಿಗಳು ಇನ್ನೂ ಕಲಿಯುವುದು ಬಹಳ ಇರುತ್ತದೆ. ಸಾಹಿತ್ಯ, ಸಂಗೀತ, ಕಲೆ, ಸಾಂಸ್ಕೃತಿಕವಾಗಿ ಉಳಿಸಿ, ಬೆಳೆಸುವ ಕೆಲಸ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ನೀಲಗುಂದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಪ್ರಕಾಶ ಪಾಟೀಲ್, ಮತ್ತಿಹಳ್ಳಿ ಅಜ್ಜಣ್ಣ, ಐಗೋಳ ಚಿದಾನಂದಪ್ಪ, ಯಶವಂತಗೌಡ ಪಾಟೀಲ್, ಪುಷ್ಪಾ ದಿವಾಕರ, ನೀಲಂ ಆರ್ಮಸ್ಟ್ರಾಂಗ್, ಸುಮ ವಿಜಯ, ಟಿ.ಎಂ.ಚಂದ್ರಶೇಖರಯ್ಯ, ಗ್ರಾಪಂ ಸದಸ್ಯರಾದ ತುಕೇಶ, ಮಾಡಲಗೇರಿ ಸುಭದ್ರಮ್ಮ, ಬಸವರಾಜ, ಕೊಟ್ರೇಶ್, ತಿಮ್ಮಣ್ಣ, ಹಾಗೂ ಇತರರಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರರ ಕಾದಂಬರಿ ಆಧಾರಿತ ಕರಿಮಾಹೆ ನಾಟಕ ಪ್ರದರ್ಶನ ನಡೆಯಿತು.