ಹರಪನಹಳ್ಳಿ: ಸೊಳ್ಳೆಗಳ ನಿಯಂತ್ರಣದತ್ತ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಮಲಮ್ಮ ಹೇಳಿದರು.
ಪಟ್ಟಣದ ಮೇಗಳಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಸೊಳ್ಳೆ ನಿಯಂತ್ರಣ ದಿನಾಚರಣೆ ಅಂಗವಾಗಿ ಸೊಳ್ಳೆ ನಿಯಂತ್ರಣ ಮಾದರಿಗಳ ಪ್ರದರ್ಶನದಲ್ಲಿ ಮಾತನಾಡಿದರು. ಮನೆ ಸುತ್ತ ನೀರು ನಿಲ್ಲದಂತೆ ಶುಚಿತ್ವ ಕಾಪಾಡಿಕೊಳ್ಳಬೇಕು. ಮನೆಯ ಕಿಟಕಿಗಳಿಗೆ ಜಾಲರಿಗಳನ್ನು ಬಳಸಬೇಕು. ಸಾಯಂಕಾಲ ಬೇವಿನ ಸೊಪ್ಪಿನ ಹೊಗೆ ಹಾಕಬೇಕು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಹಾಲಸ್ವಾಮಿ ಎಸ್.ಪಿ ಮಾತನಾಡಿ, ಸೊಳ್ಳೆಗಳು ಕಚ್ಚುವುದರಿಂದ ಮಲೇರಿಯಾ, ಡೆಂೆ, ಚಿಕೂನಗುನ್ಯಾ, ಮಿದುಳು ಜ್ವರ, ಆನೆಕಾಲು ರೋಗ, ಜೀಕಾ ರೋಗಗಳು ಬರುತ್ತವೆ. ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಜೊತೆಗೆ ಸಮುದಾಯದ ಸಹಕಾರ ಅಗತ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ಮಾತನಾಡಿ, ಸೊಳ್ಳೆಗಳ ಸಂತಾನೋತ್ಪತ್ತಿಗೆ ಇರುವ ಅವಕಾಶಗಳನ್ನು ನಾಶಪಡಿಸಬೇಕು. ಆ ಮೂಲಕ ಮಲೇರಿಯಾ ಡೆಂೆ, ಚಿಕೂನ್ ಗುನ್ಯಾ ಮತ್ತಿತರ ರೋಗಗಳ ಹರಡುವುದನ್ನು ತಡೆಗಟ್ಟಬೇಕು ಎಂದರು.
ತಾಲೂಕಿನ 28 ಶಾಲೆಯ ಮಾರ್ಗದರ್ಶಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಹಿರಿಯ ವೈದ್ಯಾಧಿಕಾರಿ ಡಾ.ವೆಂಕಟೇಶ್ ಪಿ.ಕೆ., ಹಿರಿಯ ಆರೋಗ್ಯ ಮೇಲ್ವಿಚಾರಕ ಮಲ್ಲಪ್ಪ, ರುದ್ರಾಚಾರಿ, ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ, ಭುವನೇಶ್ವರಿ, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ, ಸಿಆರ್ಪಿಗಳಾದ ಗಿರಿರಾಜ್ ಎಲ್.ಎಚ್, ಮೋಹನ್ ಕುಮಾರ್ ಕೆ.ಎಚ್, ಎಚ್.ಎಂ.ಶಿವಪ್ರಕಾಶ್, ಮುಖ್ಯಶಿಕ್ಷಕ ಎಚ್.ಸಲೀಂ ಇತರರಿದ್ದರು.
ಹರಪನಹಳ್ಳಿಯ ಮೇಗಳಪೇಟೆ ಸರ್ಕಾರಿ ಮಾಹಿಪ್ರಾ ಶಾಲೆಯಲ್ಲಿ ಸೊಳ್ಳೆ ನಿಯಂತ್ರಣ ದಿನಾಚರಣೆಯಲ್ಲಿ ಹಿರಿಯ ವೈದ್ಯಾಧಿಕಾರಿ ಡಾ.ವೆಂಕಟೇಶ್ ಪಿ.ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ, ಹಿರಿಯ ಆರೋಗ್ಯ ಮೇಲ್ವಿಚಾರಕ ಮಲ್ಲಪ್ಪ, ರುದ್ರಾಚಾರಿ, ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ, ಭುವನೇಶ್ವರಿ ಇದ್ದರು.