ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಅಪ್ಪಿತಪ್ಪಿ ಬಂದರೂ ಹಿಂದೆಂದೂ ಕಾಣದಷ್ಟು ಭ್ರಷ್ಟಾಚಾರ, ತುಷ್ಟೀಕರಣ, ಕುಟುಂಬ ರಾಜಕಾರಣ ಮತ್ತು ದಂಗೆಗಳ ಗ್ಯಾರಂಟಿ ಸಿಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ಹರಿಹರದ ಗಾಂಧಿ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಜನರ ಮುಂದಿಟ್ಟಿರುವ ಗ್ಯಾರಂಟಿ ಕಾರ್ಡ್ಗಳಿಗೆ ಯಾವುದೇ ಮೌಲ್ಯವಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತ ಬಂದಿದೆ. ಅಂಬೇಡ್ಕರ್ ದಲಿತರು, ಆದಿವಾಸಿಗಳು, ಹಿಂದುಳಿದವರಿಗೆ ಮೀಸಲಾತಿ ನೀಡಿದರು. ಆದರೆ ಧರ್ಮಾಧಾರಿತ ಮೀಸಲಾತಿ ಬಗ್ಗೆ ಹೇಳಿಲ್ಲ. ಮುಸ್ಲಿಮರಿಗೆ ಶೇ. 4 ಮೀಸಲಾತಿ ನೀಡಿದ್ದು ಕಾಂಗ್ರೆಸ್ ಎಂದರು.
ಮುಸ್ಲಿಮರಿಗೆ ಮತ್ತೆ ಮೀಸಲಾತಿ ಜಾರಿ ಮಾಡುವುದಾಗಿ ಕಾಂಗ್ರೆಸ್ನವರು ಹೇಳುತ್ತಿದ್ದಾರೆ, ಹಾಗಾದರೆ ಯಾರ ಮೀಸಲಾತಿ ತೆಗೆದು ಅವರಿಗೆ ನಿಡುತ್ತೀರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಯಾಗಲು ಒಳಜಗಳ ನಡೆಯುತ್ತಿದೆ. ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್ ಹೊಸ ಬಟ್ಟೆ ಹೊಲಿಸಿದ್ದಾರೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರೂ ಆ ರೇಸ್ನಲ್ಲಿದ್ದಾರೆ. ಪರಸ್ಪರ ಏಕೆ ಕಾಲೆಳೆಯುತ್ತೀರಿ, ಸುಮ್ಮನೆ ಜಗಳ ಮಾಡಬೇಡಿ, ನೀವು ಅಧಿಕಾರಕ್ಕೆ ಬರುವುದಿಲ್ಲ ಎಂದು ಟಾಂಗ್ ಕೊಟ್ಟರು, ಬಿಜೆಪಿಯವರೇ ಸಿಎಂ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ದೊರಕಿರುವ ಯೋಜನೆಗಳು ಮತ್ತು ರಾಜ್ಯ ಸರ್ಕಾರದಿಂದ ಆಗಿರುವ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಮಂಡಿಸಿದ ಅಮಿತ್ ಷಾ, ಕಾಂಗ್ರೆಸ್ಗೆ ವಿಕಾಸದ ಬಗ್ಗೆ ಕಾಳಜಿಯಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಇಲ್ಲಿನ ಬಡವರು, ರೈತರ ಕಲ್ಯಾಣ, ಅಭಿವೃದ್ಧಿ, ಸುರಕ್ಷತೆಯ ಬಗ್ಗೆ ಯೋಚಿಸಲಿಲ್ಲ. ದೆಹಲಿ ಕಾಂಗ್ರೆಸ್ನ ಎಟಿಎಂನಂತೆ ವರ್ತಿಸಿ ಅಲ್ಲಿಗೆ ಹಣ ಕಳಿಸುವ ಬಗ್ಗೆ ಮಾತ್ರ ಗಮನ ನೀಡಿತು ಎಂದು ಆರೋಪಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲರಾಜ್ಯದ ವಿಕಾಸ, ಸುರಕ್ಷತೆಯ ಬಗ್ಗೆ ಚಿಂತನೆ ಮಾಡಿತು ಎಂದು ಹೇಳಿದರು.